Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ದಸರಾ ಸ್ತಬ್ಧಚಿತ್ರ: ಮಂಡ್ಯಕ್ಕೆ ಪ್ರಥಮ ಬಹುಮಾನ

ಮಂಡ್ಯ: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ಬಹುಮಾನ ಘೋಷಿಸಲಾಗಿದ್ದು, ಮಂಡ್ಯ ಜಿಲ್ಲೆ ಸಾದರಪಡಿಸಿದ ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಆಣೆಕಟ್ಟು ಸ್ತಬ್ಧ ಚಿತ್ರವು ಪ್ರಥಮ ಸ್ಥಾನ ಗಳಿಸಿದೆ.

ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯ ಹಿರಿಮೆ ಮತ್ತು ಪ್ರತಿಷ್ಠೆಯಾದ ವಿಶ್ವವಿಖ್ಯಾತ ಕೆಆರ್‌ಎಸ್ ಜಲಾಶಯ ಹಾಗೂ ರಂಗನತಿಟ್ಟು ಪಕ್ಷಿಧಾಮದ ಪ್ರತಿರೂಪ ಮಾದರಿಯನ್ನು ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನ ಮಾಡಲಾಗಿತ್ತು. ಕರ್ನಾಟಕದ ಪಕ್ಷಿಕಾಶಿ ಎಂದೇ ಹೆಸರುವಾಸಿಯಾಗಿರುವ ರಂಗನತಿಟ್ಟು ಪಕ್ಷಿಧಾಮ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆದಿತ್ತು.

ಇನ್ನೂ ಧಾರವಾಡ ಜಿಲ್ಲೆಯ ಇಸ್ರೋಗೆ ಗಗನಯಾನದಲ್ಲಿ ಹಣ್ಣಿನ ನೊಣಗಳು ದ್ವಿತೀಯ, ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು ಸ್ತಬ್ಧಚಿತ್ರಕ್ಕೆ ತೃತೀಯ ಸ್ಥಾನ, ಗದಗ ಜಿಲ್ಲೆಯ ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು, ಮೈಸೂರು ಜಿಲ್ಲೆಯ ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದೆಡೆಗೆ, ಚಿಕ್ಕಮಗಳೂರು ಜಿಲ್ಲೆ ತೇಜಸ್ವಿ ವಿಸ್ಮಯ ಲೋಕ ಸ್ತಬ್ಧಚಿತ್ರಕ್ಕೆ ಸಮಾಧಾನಕರ ಬಹುಮಾನ ಗಳಿಸಿದೆ.

ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ಭಾಗವಹಿಸಿ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ವಾರ್ತಾ ಇಲಾಖೆಯ ವಿಶ್ವಗುರು ಬಸವಣ್ಣ, ರಾಷ್ಟ್ರಪಿತ ಮಹಾತ್ಮಗಾಂಧಿಜಿ ಸ್ತಬ್ಧಚಿತ್ರಕ್ಕೆ ಪ್ರಥಮ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆಸಾಧಿಸುವುದು ಸ್ತಬ್ಧಚಿತ್ರಕ್ಕೆ ದ್ವಿತೀಯ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಮೈಸೂರು ಸ್ಯಾಂಡಲ್ ಸೋಪ್ ಕಿರು ಪರಿಚಯ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ದೊರೆತಿದೆ. ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಸ್ತಬ್ಧಚಿತ್ರ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸ್ವಸ್ಥ ಮೆದುಳು:ಸ್ಪಷ್ಟ ಮಾತು ಸ್ತಬ್ಧಚಿತ್ರ, ಕಾರ್ಮಿಕ ಇಲಾಖೆಯ ಕಾರ್ಮಿಕರ ಹಿತರಕ್ಷಣೆ ಸ್ತಬ್ಧಚಿತ್ರ, ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ನಿಗಮದ ಉತ್ಪನ್ನಗಳ ಮಾದರಿ ಕುರಿತ ಸ್ತಬ್ಧಚಿತ್ರವು ಸಮಾಧಾನಕರ ಬಹುಮಾನ ಪಡೆದಿವೆ ಎಂದು ಸ್ತಬ್ಧಚಿತ್ರ ಉಪಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

 

Tags: