ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮಾರ್ಗದಲ್ಲಿ ಬದಲಾವಣೆ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಈ ಬಾರಿಯ ದಸರಾ ಮಹೋತ್ಸವ ಎಂದಿನಂತೆ ಸಹಜವಾಗಿ ಸಾಂಪ್ರದಾಯಿಕವಾಗಿ ನಡೆಯಲಿದೆ. 19 ಉಪ ಸಮಿತಿಗಳು ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಸಣ್ಣಪುಟ್ಟ ವ್ಯತ್ಯಾಸಗಳು ಆಗಲಿದೆ. ಜಂಬೂಸವಾರಿ ದಿನ ಸೀಟಿನ ಸಂಖ್ಯೆ ಹೆಚ್ಚಳ ಮಾಡುವ ತೀರ್ಮಾನ ಮಾಡಲಾಗಿದ್ದು, ನಾಲ್ಕು ನೂರು ಮೀಟರ್ ಹೆಚ್ಚಾದರೆ ಹದಿನೈದು ಸಾವಿರ ಸೀಟು ಜಾಸ್ತಿಯಾಗುತ್ತದೆ. ವೈಮಾನಿಕ ಪ್ರದರ್ಶನ ಬಗ್ಗೆ ಸಿಎಂ ಗಮನಕ್ಕೆ ತಂದು ಮಾತನಾಡುತ್ತೇನೆ ಎಂದು ಮಾಹಿತಿ ನೀಡಿದರು.
ಇನ್ನು ಕಂಜನ್ ಹಾಗೂ ಧನಂಜಯ ಆನೆಗಳ ಕಾದಾಟದ ಬಗ್ಗೆ ಮಾತನಾಡಿದ ಅವರು, ಈ ಘಟನೆಯಿಂದ ಗಾಬರಿಪಡುವ ಅಗತ್ಯ ಇಲ್ಲ. ಆನೆಗಳನ್ನು ಮಾವುತ ಕಂಟ್ರೋಲ್ ಮಾಡಿದ್ದಾನೆ. ಅವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆ. ಅವು ಚೆನ್ನಾಗಿಯೇ ಇದ್ದು ಸಾಕಿದವರನನು ತಿವಿಯಲಿದೆ. ಹಾಗಾಗಿ ಮಾವುತರು ಆನೆಗಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಹೇಳಿದರು.