ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.
ಚಾಮುಂಡಿಬೆಟ್ಟದ ಪ್ರಾಧಿಕಾರ ಸ್ಥಾಪನೆಗೆ ರಾಜಮನೆತನ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ನಾನು ಸಿದ್ದರಾಮಯ್ಯರನ್ನು ಕೆಲವು ಸೈದ್ಧಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ. ಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ಹಾಗೂ ನ್ಯೂನ್ಯತೆಗಳನ್ನು ಸರಿದೂಗಿಸಲು ಪ್ರಾಧಿಕಾರದ ಅವಶ್ಯಕತೆಯಿದೆ.
ಚಾಮುಂಡಿಬೆಟ್ಟಕ್ಕೆ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಬೇಕೇ ಬೇಕು. ಹಾಗಾಗಿ ಇದೆಲ್ಲಾ ಆಗಲು ಒಂದು ಪ್ರಾಧಿಕಾರ ಬೇಕು. ಸಿದ್ದರಾಮಯ್ಯ ಅವರು ಪ್ರಾಧಿಕಾರ ರಚನೆ ಮಾಡಿರೋದು ಒಂದು ಒಳ್ಳೆಯ ಕೆಲಸ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಅಮೃತ್ ಯೋಜನೆ ಕುಡಿಯುವ ನೀರು ಚಾಮುಂಡಿಬೆಟ್ಟಕ್ಕೆ ತಲುಪದಿರಲು ಯಾರು ಕಾರಣ ಎಂದು ಪ್ರಶ್ನಿಸಿದ ಅವರು, ನಾನು ಏನೇ ಮಾತಾಡಿದ್ರೂ ಕಾಂಟ್ರವರ್ಸಿ ಆಗುತ್ತೆ. ಪೈಪ್ ಲೈನ್ ಎಲ್ಲಿ ತಡೆದು ನಿಂತಿದೆ ನೀವೇ ಹೋಗಿ ಹುಡುಕಿ ಎನ್ನುವ ಮೂಲಕ ಹೆಸರು ಹೇಳದೇ ಸಂಸದ ಯದುವೀರ್ ಒಡೆಯರ್ಗೆ ಟಾಂಗ್ ಕೊಟ್ಟಿದ್ದಾರೆ.