ಬೆಂಗಳೂರು : ನನ್ನ ಮಗ ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಲಿ ನಾನು ಬೇಡ ಅನ್ನಲ್ಲ. ನಾನು ವಹಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ ಎಂದು ಸದನದಲ್ಲಿ ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಹೇಳಿದರು.
ಮುಂಗಾರು ಅಧಿವೇಶನದ ೨ನೇ ದಿನವಾದ ಇಂದು ಸಹ ಸದನದಲ್ಲಿ ವಾಲ್ಮೀಕಿ ಹಗರಣ ಸದ್ದು ಮಾಡಿದೆ ಜೊತೆಗೆ ವಾದ ವಿವಾದಗಳು ಕೂಡ ಮುಂದುವರೆಯಿತು. ಈ ಬೆನ್ನಲ್ಲೆ ವಿಧಾನಸಭೆಯಲ್ಲಿ ಶಾಸಕ ಎಚ್ ಡಿ ರೇವಣ್ಣ ಮಾತನಾಡಿ, ನನ್ನ ಮೇಲೆ ಯಾರೋ ಆರೋಪ ಮಾಡಿದ್ದಾರೆ. ಹೆಣ್ಣು ಮಗಳನ್ನ ಕರೆದುಕೊಂಡು ಬಂದ ಡಿಜಿ ಕಚೇರಿಯಲ್ಲಿ ಡಿಜಿ ದೂರು ಬರೆಸಿಕೊಳ್ಳತ್ತಾನೆ ಅಂದರೆ ಅವನು ಡಿಜಿ ಆಗಲು ಲಾಯಕ್ಕಾ ಎಂದು ರೇವಣ್ಣ ಪ್ರಶ್ನೆ ಮಾಡಿದರು.
ಈ ವೇಳೆ ಬಹಳ ಅನ್ಯಾಯ ಆಗಿದ್ದರೆ ನೋಟಿಸ್ ಕೊಡಿಸಿ ಚರ್ಚೆ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಇನ್ನು ಶಾಸಕ ಎಚ್ ಡಿ ರೇವಣ್ಣ ಬಂಧನದ ಬಗ್ಗೆ ಆರ್ ಅಶೋಕ್ ಕೂಡ ಸದನದಲ್ಲಿ ಉಲ್ಲೇಖಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಸದನದಲ್ಲಿ ಪ್ರಸ್ತಾಪ ಮಾಡುವ ವೇಳೆ, ವಾಲ್ಮೀಕಿ ಕೇಸ್ ನಲ್ಲಿ ನೋಟಿಸ್ ಕೊಟ್ಟು ಕರೆದೇ ಇಲ್ಲ. ಆದರೆ ರೇವಣ್ಣ, ಭವಾನಿ ರೇವಣ್ಣ ಪ್ರಕರಣದಲ್ಲಿ ಎಸ್ ಐಟಿ ತುಂಬಾ ಸ್ಟ್ರಾಂಗ್ ಇದ್ರು, ಎಷ್ಟು ಸ್ಟ್ರಾಂಗ್ ಅಂದರೆ ಎರಡೇ ದಿನದಲ್ಲಿ ಅರೆಸ್ಟ್ ಮಾಡಿದರು. ಮಾಜಿ ಶಾಸಕ ಪ್ರೀತಂಗೌಡ ಕೇಸ್ ನಲ್ಲೂ ಹಾಗೆ ಆಯಿತು. ವಾಲ್ಮೀಕಿ ನಿಗಮ ಕೇಸ್ ನಲ್ಲಿ ಇನ್ನೂ ನೋಟಿಸ್ ಸಹ ಕೊಟ್ಟಿಲ್ಲ. ಎಸ್ ಐಟಿ ಕಚೇರಿಯಲ್ಲಿ ೮ ಗಂಟೆಗಳ ಕಾಲ ಕೂರಿಸಿದ್ದರು. ಏನು ವಾಲ್ಮೀಕಿ ರಾಮಾಯಣ ಓದಲು ಕೂರಿಸಿದ್ದರಾ ಎಂದು ವಿಧಾನಸಭೆಯಲ್ಲಿ ಅಶೋಕ್ ಪ್ರಶ್ನೆ ಮಾಡಿದರು.