ಮೈಸೂರು: ಮೈಸೂರು-ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ಹೇಳಿಕೆ ನೀಡಿದ್ದ ಹಳ್ಳಿಹಕ್ಕಿ ಎಚ್. ವಿಶ್ವನಾಥ್ ಅವರಿಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಉಮೇದುವಾರಿಗೆ ವಾಪಾಸ್ ಪಡೆದರೇ ಅವಿರೋಧವಾಗಿ ಆಯ್ಕೆಯಾಗುತ್ತದೆಯಾ ಎಂದು ಶಾಸಕ ಸೇಠ್ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ವಯಸ್ಸಿನ ಸಮಸ್ಯೆ. ಹಾಗಾಗಿ ಏನೇನೋ ಮಾತನಾಡುತ್ತಾರೆ, ಅವರ ಮಾತಿನ ಮೇಲೆ ಅವರಿಗೆ ಗಮನ ಇರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಈಗಾಗಲೇ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಲಕ್ಷ್ಮಣ್ ಮಾತ್ರ ಉಮೇದುವಾರಿಗೆ ವಾಪಾಸ್ ಪಡೆದರೇ ಅವಿರೋಧವಾಗಿ ಹೇಗೆ ಆಯ್ಕೆ ಮಾಡಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನ್ನೋದು ಒಂದು ಪ್ರಕ್ರಿಯೆಯಗಿದ್ದು, ಪ್ರತಿಸ್ಪರ್ಧಿಯೊಂದಿಗೆ ಚುನಾವಣೆ ನಡೆಯಬೇಕು ಎಂದು ಕಿಡಿಕಾರಿದ್ದಾರೆ.
ವಿಶ್ವನಾಥ್ ಅವರು ಆಲ್ ಇಂಡಿಯಾ ಟೂರ್ ಹೊಡೆದು ಬಂದಿದ್ದರೂ ಇನ್ನು ಬುದ್ದಿ ಬಂದಿಲ್ಲ ಎನಿಸುತ್ತಿದೆ. ಮೊದಲು ಅವರು ಯಾವ ಪಕ್ಷದಲ್ಲಿ ಇದ್ದಾರೆ ಎಂಬುದನ್ನು ಖಚಿತಪಡಿಸಲಿ. ಅವರ ಹೇಳಕೆಯಿಂದ ನಮಗೆನೂ ಹಿನ್ನಡೆಯಾಗಲ್ಲ. ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆಯುವ ಎಲ್ಲಾ ವಾತಾವರಣವಿದೆ ಎಂದು ಶಾಸಕ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದರು.