ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರದಲ್ಲಿ ಆನೆಯೊಂದು ಮೃತಪಟ್ಟಿದೆ. ಹಾಸನದ ಬೇಲೂರಿನಲ್ಲಿ ಸೆರೆ ಹಿಡಿಯಲಾಗಿದ್ದ ತಣ್ಣೀರ್ ಕೊಂಬನ್ ಎಂಬ ಹೆಸರಿನ ಕಾಡಾನೆ ಸಾವನ್ನಪ್ಪಿದೆ.
ಹಾಸನದ ಬೇಲೂರಿನಲ್ಲಿ ಸೆರೆ ಹಿಡಿದ ಬಳಿಕ ಆನೆಗೆ ರೇಡಿಯೊ ಕಾಲರ್ ಅಳವಡಿಸಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಿಡಲಾಗಿತ್ತು. ಬಳಿಕ ಕೇರಳ ಅರಣ್ಯದ ಮೂಲಕ ಮಾನಂದವಾಡಿ ಪಟ್ಟಣಕ್ಕೆ ನುಗ್ಗಿದ್ದ ಈ ಆನೆ ಜನನಿಬಿಡ ಪ್ರದೇಶಕ್ಕೆ ನುಗ್ಗಿ ದಾಂಧಲೆ ಮಾಡಿತ್ತು.
ವಿಷಯ ತಿಳಿದ ಕೇರಳ ಅರಣ್ಯ ಇಲಾಖೆಯು ಬಂಡೀಪುರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ತದನಂತರ ಅರಣ್ಯಾಧಿಕಾರಿಗಳು ಅರವಳಿಕೆ ಚುಚ್ಚು ಮದ್ದು ನೀಡಿ ಆನೆಯನ್ನು ಸೆರೆ ಹಿಡಿದು ನಿನ್ನೆ ( ಫೆಬ್ರವರಿ 2 ) ಬಂಡೀಪುರದ ರಾಮಾಪುರ ಆನೆ ಶಿಬಿರಕ್ಕೆ ಕರೆ ತಂದಿದ್ದರು.
ಆದರೆ ಶಿಬಿರಕ್ಕೆ ಬರುತ್ತಿದ್ದಂತೆಯೇ ಆನೆ ಕುಸಿದು ಬಿದ್ದಿದ್ದು ಸಾವನ್ನಪ್ಪಿದೆ. ಆನೆ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಅದರ ಬಳಿಕ ಆನೆ ಸಾವಿಗೆ ಕಾರಣವೇನೆಂಬುದು ತಿಳಿದುಬರಲಿದೆ.
ಆನೆಯ ಸಾವಿನ ಕುರಿತು ಪರಿಸರವಾದಿ ಜೋಸೆಫ್ ಹೂವರ್ ಮಾತನಾಡಿದ್ದು ಅವೈಜ್ಞಾನಿಕವಾಗಿ ಆನೆ ಸೆರೆ ಕಾರ್ಯಾಚರಣೆ ನಡೆಸಿದ್ದೇ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದರು.