Mysore
27
few clouds

Social Media

ಬುಧವಾರ, 11 ಫೆಬ್ರವರಿ 2026
Light
Dark

ಪ್ರಾದೇಶಿಕ ಭಾಷೆಗಳಿಗೆ ಸ್ಥಾನ ಕಲ್ಪಿಸಿ : ಬರಗೂರು ರಾಮಚಂದ್ರಪ್ಪ

ಬೆಂಗಳೂರು : ‘ಪ್ರಾದೇಶಿಕ ಭಾಷೆಗಳಿಗೆ ಸ್ಥಾನ ಕಲ್ಪಿಸುವ ರಾಷ್ಟ್ರೀಯ ಭಾಷಾ ನೀತಿ ಅಗತ್ಯವಿದೆ. ಈ ನೀತಿಯಲ್ಲಿ ಬ್ಯಾಂಕ್‌ಗಳನ್ನೂ ಒಳಗೊಂಡಂತೆ ಎಲ್ಲ ನೇಮಕಾತಿಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ಕಲ್ಪಿಸುವುದು ಕಡ್ಡಾಯವಾಗಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.

‘ಸಿಆರ್‌ಪಿಎಫ್‌ ಹುದ್ದೆಗಳ ನೇಮಕಾತಿಗೆ ನಡೆಸಲಿರುವ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ಕೊಡದೆ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ. ಇದು ಕನ್ನಡದ ಪ್ರಶ್ನೆ ಮಾತ್ರವಲ್ಲ, ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳ ಪ್ರಶ್ನೆಯಾಗಿದೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಕೇಂದ್ರೀಕರಣ ನೀತಿಯ ಫಲ ಇದಾಗಿದೆ. ಒಕ್ಕೂಟ
ವ್ಯವಸ್ಥೆಯಲ್ಲಿ ಪ್ರತಿ ರಾಜ್ಯಕ್ಕೂ ತನ್ನದೇ ಆದ ಸ್ವಾಯತ್ತ ಅಸ್ತಿತ್ವ ಇರಬೇಕು. ಪ್ರಾದೇಶಿಕ ಭಾಷೆ ಮತ್ತು ಸಾಂಸ್ಕೃತಿಕ ವಿಶಿಷ್ಟತೆಗೆ ಮನ್ನಣೆ ಕೊಡಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯಗಳ ಶೈಕ್ಷಣಿಕ, ಭಾಷಿಕ ಮತ್ತು ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುವ ನೀತಿಗಳನ್ನು ಜಾರಿ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಜಿಎಸ್‌ಟಿ ಮತ್ತು ನೀಟ್ ಪದ್ಧತಿಗಳು ಕೇಂದ್ರೀಕೃತ ನೀತಿಯ ಫಲವಾಗಿದ್ದಾ, ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಉದ್ಯೋಗಗಳಿಗೆ ನಡೆಸುವ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಸ್ಥಾನ ನೀಡದಿರುವುದು ಇದೇ ಕೇಂದ್ರೀಕೃತ ನೀತಿಯ ವಿಸ್ತರಣೆಯಾಗಿದೆ. ಆದ್ದರಿಂದ ನಾವೀಗ ಪ್ರಾದೇಶಿಕ ಭಾಷೆಗಳಿಗೆ ಸ್ಥಾನಮಾನ ಕಲ್ಪಿಸುವ ರಾಷ್ಟ್ರೀಯ ಭಾಷಾ ನೀತಿಗಾಗಿ ಒತ್ತಾಯಿಸಬೇಕು. ಶಿಕ್ಷಣ, ಉದ್ಯೋಗಾದಿ ಕ್ಷೇತ್ರಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕಡ್ಡಾಯವಾಗಿ ಸ್ಥಾನ ಕಲ್ಪಿಸುವ ನೀತಿ ರೂಪುಗೊಂಡು, ಅನುಷ್ಠಾನವಾದರೆ ಪ್ರತಿ ಬಾರಿ ಹಕ್ಕೊತ್ತಾಯ ಮಂಡಿಸುವುದು ತಪ್ಪುತ್ತದೆ’ ಎಂದು ಹೇಳಿದ್ದಾರೆ.

‘ಕನ್ನಡವನ್ನೂ ಒಳಗೊಂಡಂತೆ ಪ್ರಾದೇಶಿಕ ಭಾಷೆಗಳಿಗೆ ಸೂಕ್ತ ಸ್ಥಾನ ಕಲ್ಪಿಸಿ, ಒಕ್ಕೂಟ ವ್ಯವಸ್ಥೆಗೆ ಬೆಲೆ ಕೊಡುವ ರಾಷ್ಟ್ರೀಯ ಭಾಷಾ ನೀತಿಗೆ ಹಕ್ಕೊತ್ತಾಯ ಮಂಡಿಸುವುದಾಗಿ ಇಲ್ಲಿನ ರಾಜಕೀಯ ಪಕ್ಷಗಳು ಚುನಾವಣೆ
ಪ್ರಣಾಳಿಕೆಯಲ್ಲಿ ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!