Mysore
23
overcast clouds

Social Media

ಭಾನುವಾರ, 21 ಜೂನ್ 2026
Light
Dark

ಜಮೀನು ವಿವಾದ; ಕಾರು ಹತ್ತಿಸಿ ಮಹಿಳೆಯ ಕೊಲೆ

ನಾಗಮಂಗಲ: ಎರಡು ಕುಟುಂಬಗಳ ನಡುವಿನ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವುದರ ಜತೆಗೆ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಗಾಣಸಂದ್ರ ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಗಾಣಸಂದ್ರ ಗ್ರಾಮದ ರಾಮಕೃಷ್ಣಯ್ಯ ಎಂಬವರ ಪತ್ನಿ ಜಯಲಕ್ಷ್ಮಮ್ಮ (೫೦) ಕೊಲೆಯಾದವರು. ಜಮೀನು ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಚಾಲಕ ನವೀನ್ ಮತ್ತು ಜಗಳ ಬಿಡಿಸಲು ಹೋದ ದೇವರಾಜು ಹಲ್ಲೆಗೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತ್ತಿದ್ದಾರೆ. ಇದೇ ಗ್ರಾಮದ ಗೌಡಯ್ಯ, ಮಗ ಅನಿಲ್‌ಕುಮಾರ್, ಸಂಬಂಧಿ ಬಸವರಾಜು ಸೇರಿದಂತೆ ಎಂಟು ಮಂದಿಯ ಗುಂಪು ಸೇರಿ ಮಹಿಳೆಯ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿ, ಇಬ್ಬರನ್ನು ಗಾಯಗೊಳಿಸಿರುವ ಆರೋಪಿಗಳಾಗಿದ್ದಾರೆ.

ಜಯಲಕ್ಷ್ಮಮ್ಮನಿಗೆ 10 ವರ್ಷಗಳ ಹಿಂದೆ ಗಾಣಸಂದ್ರ ಗ್ರಾಮದ ಸ.ನಂ.೮೪ರ ಬಗರ್ ಹುಕುಂ ಸಾಗುವಳಿ ಜಮೀನು ಮಂಜೂರಾಗಿ ಇದಕ್ಕೆ ಸಂಬಂಧಿಸಿದ ಭೂ ದಾಖಲೆಗಳೂ ಸಹ ಇವರ ಹೆಸರಿನಲ್ಲಿ ಚಾಲ್ತಿಯಲ್ಲಿದ್ದವು. ಅಂದಿನಿಂದ ಜಮೀನು ಉಳುಮೆ ಮಾಡಿಸುತ್ತಿದ್ದ ಇವರಿಗೆ ಈ ಜಮೀನು ನಮಗೆ ಸೇರಬೇಕೆಂದು ಇದೇ ಗ್ರಾಮದ ಗೌಡಯ್ಯ ಮತ್ತವರ ಕುಟುಂಬಸ್ಥರು ತೊಂದರೆ ಕೊಡುತ್ತಿದ್ದರು.
ಅಲ್ಲದೆ ಜಮೀನಿನಲ್ಲಿ ಹಾಕಿಸಿರುವ ಕೊಳವೆ ಬಾವಿ, ವಿದ್ಯುತ್ ವೈರನ್ನು ಕತ್ತರಿಸಿ ಹಾಕಿದ್ದರು. ಎರಡು ಕುಟುಂಬಗಳ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು ಎನ್ನಲಾಗಿದೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಜಯಲಕ್ಷ್ಮಮ್ಮ ಜಮೀನು ಉಳುಮೆ ಮಾಡಿಸುವ ಸಲುವಾಗಿಯೇ ಭಾನುವಾರ ಗ್ರಾಮಕ್ಕೆ ಆಗಮಿಸಿದ್ದರು. ಜಮೀನು ಉಳುಮೆ ಮಾಡಿಸುತ್ತಿದ್ದ ವೇಳೆ ಏಕಾಏಕಿ ಬಂದ ಗೌಡಯ್ಯ, ಮಗ ಅನಿಲ್‌ಕುಮಾರ್ ಸೇರಿದಂತೆ ಎಂಟು ಮಂದಿಯ ಗುಂಪು ಗಲಾಟೆ ನಡೆಸಿ, ಟ್ರಾಕ್ಟರ್ ಚಾಲಕ ನವೀನ್ ಮತ್ತು ಜಗಳ ಬಿಡಿಸಲು ಬಂದ ದೇವರಾಜು ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿದ್ದ ಜಯಲಕ್ಷ್ಮಮ್ಮನ ಮೇಲೆ ಕಾರು ಹತ್ತಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಜಯಲಕ್ಷಮ್ಮ ಸ್ಥಳದಲ್ಲೇ ಮೃತಪಟ್ಟರು.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾರ್ಯ  ಪ್ರವೃತ್ತರಾದ ಬೆಳ್ಳೂರು ಠಾಣೆಯ ಪೊಲೀಸರು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನುಳಿದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಆದಿಚುಂಚನಗಿರಿ ಆಸ್ಪತ್ರೆುಂಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆಯಾಗಿರುವ ಜಯಲಕ್ಮಮ್ಮ ಮೃತದೇಹವನ್ನು ಇದೇ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು.


ಆರೋಪಿಗಳ ಪತ್ತೆಗೆ ಶೋಧ
ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಪೊಲೀಸರು ವಶಕ್ಕೆ ಪಡೆದಿರುವ ನಾಲ್ವರನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿ ಬಂಧಿಸಲಾಗಿದೆ. ಇನ್ನುಳಿದ ನಾಲ್ಕು ಮಂದಿ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!