Mysore
24
overcast clouds

Social Media

ಗುರುವಾರ, 18 ಜೂನ್ 2026
Light
Dark

ಏಕಲವ್ಯ ನಿವಾಸಿಗಳ ಪ್ರತಿಭಟನೆ: ಬಂಧನ, ಬಿಡುಗಡೆ

ಮೈಸೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹಠಾತ್ ಪ್ರತಿಭಟನೆ ನಡೆಸಿದ ಏಕಲವ್ಯ ನಗರ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಂಗಾಲದ ಪೊಲೀಸರು, ಹಸುಗೂಸು, ಚಿಕ್ಕ ಮಕ್ಕಳು, ಮಹಿಳೆಯರನ್ನೂ ಬಿಡದೆ 50 ಜನರನ್ನು ಬಂಧಿಸಿ ಕರೆದೋಯ್ದರು. ಮೂರು ವ್ಯಾನ್‌ಗಳಲ್ಲಿ ಅವರನ್ನು ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಲಾಯಿತು.

ಜಿಲ್ಲಾಡಳಿತದ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮೆರವಣಿಗೆ ಚಾಲನೆ ನೀಡಿದ ಸಚಿವರು, ಅಲ್ಲೇ ಕೂಗಳತೆ ದೂರದಲ್ಲಿರುವ ಡಾ.ರಾಜ್‌ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೊರಟರು. ಆಗ ಚಾಮರಾಜ ವೃತ್ತದಲ್ಲಿ ಪ್ರತಿಭಟನಾಕಾರರು ಸಚಿವರಿಗೆ ಘೇರಾವ್ ಹಾಕಿ ಘೋಷಣೆಗಳನ್ನು ಕೂಗಿದರು. ಇದರಿಂದ ಗಲಿಬಿಲಿಗೊಂಡ ಸಚಿವರು, ಮಾಲಾರ್ಪಣೆ ಮಾಡದೆ ಅಲ್ಲಿಂದ ವಾಪಸ್ ಆಗಿ ಕಾರು ಹತ್ತಿ ಹೊರಟು ಹೋದರು. ಇದರಿಂದ ಇನ್ನಷ್ಟು  ಕೆರಳಿದ ಪ್ರತಿಭಟನಾಕಾರರು ಮೆರವಣಿಗೆ ನುಗ್ಗಲು ಪ್ರಯತ್ನಿಸಿದರು. ಅವರನ್ನು ಪೊಲೀಸರು ತಡೆದು ನಿಲ್ಲಿಸಿದರು. ಪ್ರತಿಭಟನಾನಿರತ ಮಕ್ಕಳು, ಮಹಿಳೆಯರು ರಸ್ತೆಯಲ್ಲೇ  ಕುಳಿತು ಘೋಷಣೆಗಳನ್ನು ಕೂಗಿದರು.

ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ‘ಜಿಲ್ಲಾಧಿಕಾರಿ ಕಚೇರಿ ಎದುರು 50 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕೂ ನಮ್ಮ ಕಷ್ಟ ಕೇಳಲಿಲ್ಲ. ಮನವಿ ಕೊಡಲು ಹೋದರೂ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಏಕಲವ್ಯ ನಗರದ ಅಲೆಮಾರಿ ಸಮುದಾಯದ ನಾಗರಿಕರಿಗೆ ಮನೆ, ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪಂಜಿನ ಮೆರವಣಿಗೆ ನಡೆಸಿದವು. ನಾಡಹಬ್ಬ ದಸರಾ ಮಹೋತ್ಸವಕ್ಕೂ ಯಾವುದೇ ರೀತಿ ಅಡ್ಡಿಪಡಿಸಲಿಲ್ಲ. ಆದರೂ, ನಮ್ಮ ಅಹವಾಲು ಕೇಳುತ್ತಿಲ್ಲ ಎಂದು ಕಿಡಿಕಾರಿದರು.

12 ವರ್ಷಗಳ ಹಿಂದೆ ಕೊಳಗೇರಿ ನಿರ್ಮೂಲನ ಮಂಡಳಿಯ  ಜೆ-ನರ್ಮ್ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ ನಿವಾಸಿಗಳನ್ನು ಶ್ಯಾದನಹಳ್ಳಿಯ ಗೋಮಾಳಕ್ಕೆ ಸ್ಥಳಾಂತರಿಸಿತು. ಅದನ್ನು ಏಕಲವ್ಯ ನಗರವೆಂದು ಜಿಲ್ಲಾಡಳಿತ ಘೋಷಿಸಿದೆ. ಆದರೆ, ಮನೆ ಹಕ್ಕು ಪತ್ರವನ್ನು ನೀಡದೇ ಅಲೆಸುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!