ಶಿವಮೊಗ್ಗ: ನಾನೊಬ್ಬ ನಂಬಿಗಸ್ಥ ಮುಸಲ್ಮಾನ ಇರಬಹುದು, ಆದರೆ ಅದಕ್ಕೂ ಮೊದಲು ನಾನೊಬ್ಬ ಹೆಮ್ಮೆಯ ಭಾರತೀಯ ಮತ್ತು ನಾನು ಕನ್ನಡಿಗನಾಗಿದ್ದೇನೆ. ಆ ನಂತರ ನಾನೊಬ್ಬ ಮುಸಲ್ಮಾನ ಎಂದು ಹೇಳಿಕೊಳ್ಳಲು ನನಗೆ ಅಭಿಮಾನವಾಗುತ್ತದೆ ಎಂದು ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು(ಫೆಬ್ರವರಿ. 25) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳನ್ನು ಎಲ್ಲಾ ಸಮಾಜದ ಜನರು ನಂಬಿರುತ್ತಾರೆ. ನಾವು ಜಾತಿ ಮತ್ತ ಧರ್ಮದ ರಾಜಕಾರಣ ಮಾಡಲು ಹೋದರೆ, ದೇವರು ಸಹ ಮೆಚ್ಚಲಾರ ನಾಡಿನ ಸಮಸ್ತ ಜನ ಪ್ರತಿನಿಧಿಗಳಾಗಿರುವ ನಾವು ಜಾತಿ ಹಾಗೂ ಧರ್ಮ ರಾಜಕಾರಣ ಮಾಡಿದರೆ ನಮ್ಮ ಮಕ್ಕಳಿಗೆ ಖಂಡಿತವಾಗಿಯೂ ಒಳ್ಳೆಯದಾಗುವುದಿಲ್ಲ ಎಂದಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಬಂದ ಮೇಲೆ ದಯವಿಟ್ಟು ಯಾರೂ ಜಾತಿ ರಾಜಕಾರಣ ಮತ್ತು ಧರ್ಮ ರಾಜಕಾರಣ ಮಾಡಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ. ರಾಜಕೀಯ ನಾಯಕರು ಜಾತಿ ಮತ್ತು ಧರ್ಮವನ್ನು ಅವರ ಮನೆಯಲ್ಲೇ ಮಾಡಬೇಕೇ ಹೊರತು, ಸಮಾಜದಲ್ಲಿ ಅಲ್ಲ. ಅವರು ಸಮಾಜಕ್ಕೆ ಆದರ್ಶವಾಗಿರಬೇಕು ಎಂಬ ತತ್ವದಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಹೀಗಾಗಿ ರಾಜಕಾರಣಿಗಳು ಜಾತಿ ಮತ್ತು ಧರ್ಮವನ್ನು ರಾಜಕಾರಣಕ್ಕೆ ಎಳೆದು ತರುವುದನ್ನು ನಿಲ್ಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬೆಳಗಾವಿಯ ಕಂಡಕ್ಟರ್ ಮೇಲಿನ ಹಲ್ಲೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಪುಂಡರ ಗುಂಪು ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆದ ಸೌಹಾರ್ದವನ್ನು ಹಾಳುಮಾಡುವ ಹುನ್ನಾರ ನಡೆಸುತ್ತಿವೆ ಎಂದು ಪರೋಕ್ಷವಾಗಿ ಎಂಇಎಸ್ ವಿರುದ್ಧ ವಾಗ್ದಾಳಿ ನಡೆಸಿದರು.





