Mysore
25
overcast clouds
Light
Dark

ಅಂಜಲಿ ಅಂಬಿಗೇರ ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು: ಗೃಹ ಸಚಿವ

ಹುಬ್ಬಳ್ಳಿ: ನೇಹಾ ಹೀರೆಮಠ ಹತ್ಯೆ ಪ್ರಕರಣದ ಬೆನ್ನಲ್ಲೇ ಅಂಜಲಿ ಅಂಬಿಗೇರ ಕೊಲೆ ನಡೆದಿದ್ದು, ಅಂಜಲಿ ಪ್ರಕರಣವನ್ನು ಇನ್ನೆರೆಡು ದಿನಗಳಲ್ಲಿ ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ.

ಇಂದು(ಮೇ.೨೦) ಹುಬ್ಬಳ್ಳಿಯ ವೀರಾಪುರದಲ್ಲಿರುವ ಅಂಜಲಿ ನಿವಾಸಕ್ಕೆ ಗೃಹ ಮಂತ್ರಿ ಪರಮೇಶ್ವರ್‌ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ದುರಾದೃಷ್ಟಕರವಾಗಿ ಹುಬ್ಬಳ್ಳಿಯಲ್ಲೇ ಎರಡು ಕೊಲೆ ಪ್ರಕರಣಗಳು ನಡೆದು ಹೋಗಿವೆ. ಅಂಜಲಿ ಕೊಲೆ ಆರೋಪಿ ಗಿರೀಶ್‌ ಪೊಲೀಸರ ವಶದಲ್ಲಿದ್ದು, ಆರೋಪಿಗೆ ಕಾನೂನಾತ್ಮಕ ಶಿಕ್ಷೆ ನೀಡಲು ಪೊಲೀಸ್‌ ಇಲಾಖೆ ಸಾಕ್ಷ್ಯದಾರಗಳನ್ನು ಕಲೆ ಹಾಕುತ್ತಿದೆ. ಈ ಸಂಬಂಧ ಪ್ರಕರಣವನ್ನು ಇಂದು ಅಥವಾ ನಾಳೆ ಸಿಐಡಿಗೆ ವಹಿಸಲಾಗುವುದು ಎಂದು ಪರಮೇಶ್ವರ್‌ ಹೇಳಿದರು.

ಹತ್ಯೆಯಾದ ಅಂಜಲಿಯವರದ್ದು, ಕಡು ಬಡತನದ ಕುಟುಂಬವಾಗಿದೆ. ಈ ಎರಡು ಪ್ರಕರಣಗಳ ಮಾಹಿತಿಯನ್ನು ಬೆಂಗಳೂರಿನಲ್ಲೇ ಇದ್ದುಕೊಂಡು ಸಂಗ್ರಹಿಸುತ್ತಿದ್ದೆ. ಮಾನವೀಯ ದೃಷ್ಠಿಯಿಂದ ಎರಡು ಕುಟುಂಬಗಳ ಮನೆಗೆ ಭೇಟಿ ನೀಡಿದ್ದೇನೆ. ಜತೆಗೆ ಈ ಪ್ರಕರಣ ಸಂಬಂಧ ಪೊಲೀಸರಿಗೆ ಕೆಲ ಸೂಚನೆಗಳನ್ನು ನೀಡಬೇಕಿದೆ. ಹಾಗಾಗಿ ಹುಬ್ಬಳ್ಳಿಗೆ ಬಂದಿರುವುದಾಗಿ ಗೃಹ ಸಚಿವರು ತಿಳಿಸಿದರು.

ಇನ್ನು ನೇಹಾ ಹೀರೆಮಠ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ ಎಂದು ಕೂಗುಗಳು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯ ಪೊಲೀಸ್‌ ಇಲಾಖೆ ಸಮರ್ಥರಿದ್ದಾರೆ, ಹೀಗಾಗಿ ಸಿಬಿಐಗೆ ಕೊಡುವುದಿಲ್ಲ. ಹೊರಗಿನವರಿಂದ ಕೆಲವು ಬಾರಿ ಇಂತಹ ಪ್ರಕರಣಗಳು ತನಿಖೆಯಾಗಬೇಕು ಹಾಗಾಗಿ ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ಸಮರ್ಥನೆ ನೀಡಿದರು.