ಬಳ್ಳಾರಿ: ಗೃಹಲಕ್ಷ್ಮೀ ಹಣವನ್ನು ಪ್ರತಿ ತಿಂಗಳು ಕೊಡುತ್ತೇವೆ ಎಂದು ಹೇಳಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಉಲ್ಟಾ ಹೊಡೆದಿದ್ದಾರೆ.
ಈ ಕುರಿತು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಈ ಬಗ್ಗೆ ಮಾತನಾಡಿದ ಅವರು, ನೋಡ್ರಿ ಪ್ರತಿ ತಿಂಗಳು ಹಣ ಕೊಡ್ತೀವಿ ಎಂದು ನಾವು ಹೇಳಿಲ್ಲ. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು. ನಾವು ದುಡ್ಡು ಕೊಡ್ತಾ ಇರಬೇಕು. ಈಗ ಗುತ್ತಿಗೆ ಕೆಲಸ ಮಾಡುವವರಿಗೆ ನಾಳೆನೇ ಹಣ ಬಂದುಬಿಡುತ್ತಾ? 2, 3, 5 ವರ್ಷ ಆಗುತ್ತೆ ಅಲ್ವಾ. ಅದೇ ರೀತಿ ಇದೂ ಕೂಡ ಬಂದಾಗ ಬರುತ್ತ ಎಂದು ಹಾರಿಕೆ ಉತ್ತರ ನೀಡಿದರು.
ಇನ್ನು ಗ್ರೇಟರ್ ಬೆಂಗಳೂರು ಮಾಡಿ ರಿಯಲ್ ಎಸ್ಟೇಟ್ ಮಾಫಿಯಾ ಮಾಡ್ತಿದ್ದಾರೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಉತ್ತರಿಸಿದ ಅವರು, ನಮ್ಮದು ಕಾಂಗ್ರೆಸ್ ಗ್ಯಾರಂಟಿ. ಆದ್ರೆ ಬಿಜೆಪಿಯದ್ದು ಪಕ್ಷದ ಗ್ಯಾರಂಟಿ ಅಲ್ಲ. ಮೋದಿಯ ಗ್ಯಾರಂಟಿ. ನಮ್ಮ ಗ್ಯಾರಂಟಿಯನ್ನೇ ಬಿಜೆಪಿ ಸರ್ಕಾರದಲ್ಲಿ ಅನುಕರಣೆ ಮಾಡ್ತಿದ್ದಾರೆ. ನರೇಗಾ ಟೀಕೆ ಮಾಡುತ್ತಿದ್ದರು. ಉಳುವವನೇ ಭೂಮಿಯ ಒಡೆಯ ತೆಗೆಯೋಕೆ ಆಯ್ತಾ? ಎಂದು ಪ್ರಶ್ನೆ ಮಾಡಿದರು.





