ಬೆಂಗಳೂರು: ನಮಗೆ ಮೋದಿಯ ರಾಮ ಬೇಡ, ದಶರಥ ರಾಮ ಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಿನ್ನೆ(ಸೋಮವಾರ) ಜೈ ಶ್ರೀರಾಮ್ ಅಂತ ಘೋಷಣೆ ಕೂಗಿರುವುದಕ್ಕೆ ಟೀಕೆ ಮಾಡಿರುವ ಬಿಜೆಪಿಗೆ, ಸಿದ್ದರಾಮಯ್ಯ ಜೈ ಶ್ರೀರಾಮ್ ಅಂದರೆ ತಪ್ಪೇನು? ನಾವೆಲ್ಲರೂ ಜೈ ಶ್ರೀರಾಮ್ ಅಂತ ಹೇಳಿದ್ದೇವೆ. ಹೇಳದೇ ಇದ್ದರೆ ಶ್ರೀರಾಮನ ವಿರೋಧಿ ಅಂತಾರೆ. ಹೇಳಿದರೆ ಹೀಗೆ ಅಂತಾರೆ. ಇದರಲ್ಲಿ ಯಾವುದು ಸರಿ ಎಂದು ಪರಮೇಶ್ವರ್ ಪ್ರಶ್ನ ಮಾಡಿದ್ದಾರೆ.
ನಾವೆಲ್ಲ ಶ್ರೀರಾಮನ ಭಕ್ತರೇ, ಒಂದಲ್ಲ ಒಂದು ರೀತಿ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಅಂತ ಹೇಳ್ತೀವಿ. ಶ್ರೀರಾಮ ಇವರಾರೋ 4 ಜನಕ್ಕೆ ಆಗೋದಲ್ಲ. ನಮಗೆ ದಶರಥ ರಾಮ ಬೇಕು. ನಮಗೆ ಮೋದಿ ರಾಮ ಬೇಕಾಗಿಲ್ಲ. ನಮಗೆ ಈ ದೇಶವನ್ನು ರಾಮ ರಾಜ್ಯ ಮಾಡಿದ ದಶರಥ ರಾಮ ಬೇಕೆ ಹೊರತು ರಾಮ ಹೆಸರು ಹೇಳಿಕೊಂಡು ಒಡೆದಾಳುವ ನೀತಿ ಆಚರಣೆ ಮಾಡುವವರು ನಮಗೆ ಬೇಕಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಕಿಡಿಕಾರಿದ್ದಾರೆ.





