ವಯನಾಡು: ದೇವರನಾಡು ಕೇರಳ ಈಗ ಮರಣ ದಿಬ್ಬವಾಗಿದ್ದು, ವಯನಾಡು ದುರಂತದಲ್ಲಿ ಸಾವಿನ ಸಂಖ್ಯೆ 300ಕ್ಕೆ ಏರಿಕೆಯಾಗಿದೆ.
ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಈವರೆಗೂ 300ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದು, 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಇನ್ನೂ 240 ಮಂದಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಅವಶೇಷಗಳಡಿ ಸಿಲುಕಿರುವವರ ಪತ್ತೆಗೆ ಸೇನೆ ಹಾಗೂ ಎನ್ಡಿಆರ್ಎಫ್ ತಂಡ ಅವಿರತವಾಗಿ ಶ್ರಮಿಸುತ್ತಿವೆ.
ಕಾರ್ಯಾಚರಣೆಯಲ್ಲಿ 10ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಲಾಗಿದ್ದು, ಮಣ್ಣು-ಕಲ್ಲುಗಳನ್ನು ತೆರವು ಮಾಡಲಾಗುತ್ತಿದೆ. ಸ್ಥಳದಲ್ಲಿ ಶ್ವಾನಗಳನ್ನು ಬಳಸಿ ಶೋಧ ಕಾರ್ಯ ನಡೆಯುತ್ತಿದ್ದು, ಜೆಸಿಬಿಯನ್ನು ಸಹ ನದಿಗೂ ಸಹ ಇಳಿಸಲಾಗಿದೆ. ಚಲಿಯಾರ್ ನದಿ ಪ್ರತಾಪ ಕೊಂಚ ಕಡಿಮೆಯಾಗಿದ್ದು, ತಾತ್ಕಾಲಿಕ ಸೇತುವೆ ಬಳಕೆಗೆ ಲಭ್ಯವಾಗಿದೆ.
ಈ ಕಾರ್ಯಾಚರಣೆ ಇನ್ನೂ 15 ದಿನಗಳ ಕಾಲ ಮುಂದುವರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಾವಿನ ಸಂಖ್ಯೆ 500 ದಾಟಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ದುರಂತ ಸ್ಥಳಕ್ಕೆ ಇಂದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಅನೇಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯಲ್ಲಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಇನ್ನು ಶವಗಳನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದ್ದು, ಶವಗಳ ಮುಂದೆ ಕುಟುಂಬದವರ ರೋಧನೆ ಹೇಳತೀರದಾಗಿದೆ.