ಗದಗ: ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಗದಗ ಜಿಲ್ಲೆಯ ರೋಣ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಇನ್ನು ವಕ್ಫ್ ವಿಚಾರದಲ್ಲಿ ಬಿ.ವೈ.ವಿಜಯೇಂದ್ರ 150 ಕೋಟಿ ಆಮಿಷ ಒಡ್ಡಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾನಪ್ಪಾಡಿ ಅವರು ಅವರದೇ ವಿಡಿಯೋದಲ್ಲಿ ನೀಡಿದ ಹೇಳಿಕೆ ಆಧಾರದ ಮೇಲೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದರು.
ಸಿಬಿಐ ತನಿಖೆಗೆ ಕೊಟ್ಟರೆ ಕಾಂಗ್ರೆಸ್ಸಿನವರೇ ಸಿಕ್ಕಿ ಬೀಳ್ತಾರೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಉತ್ತರಿಸಿದ ಸಿಎಂ, ಹಾಗಿದ್ರೆ CBI ತನಿಖೆಗೆ ಕೊಡ್ಲಿ ಎಂದು ಸವಾಲು ಹಾಕಿದರು. ವಿಡಿಯೊದಲ್ಲಿರುವ ಧ್ವನಿ ಮಾನಪ್ಪಾಡಿ ಅವರದ್ದೋ ಅಥವಾ ಅಲ್ವೋ ಎಂದು ಮಾಧ್ಯಮದವರಿಗೇ ಚೆನ್ನಾಗಿ ಗೊತ್ತಿರುತ್ತೆ ತಾನೇ ಎಂದು ಪ್ರಶ್ನಿಸಿದರು.





