ಬೆಂಗಳೂರು: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿಂದು ವಿಧಾನಸೌಧದ ಎದುರು ಸಾವಿರಾರು ಯೋಗಪಟುಗಳಿಂದ ಯೋಗಾಭ್ಯಾಸ ಮಾಡಿದರು.
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿಂದು ಸಾವಿರಾರು ಯೋಗಪಟುಗಳಿಂದ ಯೋಗಾಭ್ಯಾಸ ನಡೆಯಿತು. ಆಯುಷ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಟ ಅನಿರುದ್ಧ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಟಿ ಸಾನ್ಯ ಅಯ್ಯರ್, ನಟ ಶೈನ್ ಶೆಟ್ಟಿ ಭಾಗಿಯಾಗಿದ್ದರು. ಇಂದು ಬೆಳಿಗ್ಗೆ 6 ಗಂಟೆಯಿಂದ ಶುರುವಾದ ಯೋಗಾಭ್ಯಾಸ ಕಾರ್ಯಕ್ರಮವು 8.30ರವರೆಗೆ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಯೋಗ ಭಾರತದ ಸಂಸ್ಕೃತಿಯ ಪ್ರತೀಕ. ವಿಶ್ವದ ಬಹುತೇಕ ದೇಶಗಳಲ್ಲಿ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರವು ಯೋಗ ದಿನವನ್ನು ಉತ್ತಮವಾಗಿ ಆಚರಣೆ ಮಾಡಿದೆ. ಯೋಗ ಜೀವನವನ್ನು ಪರಿಪೂರ್ಣ ಮಾಡುತ್ತದೆ. ಎಲ್ಲರೂ ಯೋಗ ಮಾಡಿ ನಿರೋಗಿ ಆಗಿ ಎಂದು ಸಲಹೆ ನೀಡಿದರು.





