Mysore
15
scattered clouds

Social Media

ಶನಿವಾರ, 31 ಜನವರಿ 2026
Light
Dark

ಬಿಜೆಪಿ-ಜೆಡಿಎಸ್‌‍ ಮೈತ್ರಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ-ಜೆಡಿಎಸ್‌‍ ಮೈತ್ರಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಊಹಾಪೋಹಗಳಿಗೆ ತೆರೆ ಎಳೆದರು.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎನ್‌ಡಿಎ ಅಂಗಪಕ್ಷಗಳಾಗಿರುವ ಎರಡು ಪಕ್ಷಗಳ ಮೈತ್ರಿ ಮುಂದುವರೆಯುತ್ತದೆ ಎಂದರು.

ಬಿಜೆಪಿ-ಜೆಡಿಎಸ್‌‍ ಮೈತ್ರಿ ಸರ್ಕಾರವಿದ್ದಾಗ ವಿಜಯನಗರದ ಕೃಷ್ಣದೇವರಾಯನ ಆಡಳಿತ ಅವಧಿಯನ್ನು ನೆನಪಿಸುವಂತಿತ್ತು ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದರು. ಕಾಂಗ್ರೆಸ್‌‍ನವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ದುಡ್ಡಿನ ಮದದಿಂದ ಹೇಳುತ್ತಿದ್ದಾರೆ. ಹಣ ನೀಡಿ ವೋಟು ಹಾಕಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಜನರು ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ. 2 ವರ್ಷಗಳ ನಂತರ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದ ಅವರು, ನಾನು ಕ್ರಾಂತಿಯ ಬಗ್ಗೆ ಮಾತನಾಡಿಲ್ಲ. ಕ್ರಾಂತಿಯೂ ಇಲ್ಲ ಭ್ರಾಂತಿಯೂ ಇಲ್ಲ, ವಾಂತಿಯೂ ಇಲ್ಲ. ಭಗವಂತನ ಆಶೀರ್ವಾದದಿಂದ ಆರೋಗ್ಯ ಸುಧಾರಿಸಿದ್ದು, ಗಟ್ಟಿಮುಟ್ಟಾಗಿ ಇದ್ದೇನೆ ಎಂದು ಅವರು ಹೇಳಿದರು.

ಇದನ್ನು ಓದಿ: ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇವರೇ : ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ಕಿಡಿ

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಂಚರತ್ನ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರೂ ಜನರು ಪಕ್ಷವನ್ನು ಅಧಿಕಾರಕ್ಕೆ ತರಲಿಲ್ಲ. ಸ್ವಾಭಿಮಾನದಲ್ಲಿ ಜನರು ಬದುಕುವಂತ ವಾತಾವರಣ ನಿರ್ಮಿಸಬೇಕಿದೆ ಎಂದರು.

ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ಹಣ ಕೊಡಲಿಲ್ಲ ಎಂದು ಕೈಕಟ್ಟಿ ಕೂರಲಿಲ್ಲ. ಕೊಡಗಿನಲ್ಲಿ ಮಳೆ ಹಾನಿ ಉಂಟಾದಾಗ ಮನೆ ಕಟ್ಟಿಕೊಡಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಬೆಳೆ ಹಾನಿ ಪರಿಹಾರವನ್ನು ನೀಡಿಲ್ಲ. ತುಂಗಭದ್ರ ಜಲಾಶಯದ ಕ್ರಸ್ಟ್‌ ಗೇಟ್‌ ಸರಿಪಡಿಸದ ಕಾರಣ 2ನೇ ಬೆಳೆಗೆ ನೀರಿಲ್ಲದಂತಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವಂತಹ ವಾತಾವರಣವನ್ನು ರಾಜ್ಯ ಸರ್ಕಾರ ಸೃಷ್ಟಿ ಮಾಡಬೇಕು. 10,500 ಇವಿ ಬಸ್‌‍ಗಳಲ್ಲಿ ರಾಜ್ಯಕ್ಕೆ ನಾಲ್ಕೂವರೆ ಸಾವಿರ ಬಸ್‌‍ಗಳನ್ನು ನೀಡಲಾಗಿದೆ. ರಾಜ್ಯದ ಅಭಿವೃದ್ದಿಗೆ ಮಾಡಿರುವ ಕಾರ್ಯಗಳ ಬಗ್ಗೆ ಧಾರವಾಹಿ ರೀತಿ ಪಟ್ಟಿ ಕೊಡಬಲ್ಲೆ ಎಂದರು.

ಕಳೆದ ಎರಡು ವರ್ಷಗಳಿಂದ ಅಧಿಕಾರ ಹಸ್ತಾಂತರದಲ್ಲೇ ಕಾಲ ಕಳೆದಿದ್ದಾರೆ. ಆರ್‌ಎಸ್‌‍ಎಸ್‌‍ ವಿಷಯದಲ್ಲಿ ಚರ್ಚೆ ಮಾಡುವುದರಿಂದ ಏನು ಪ್ರಯೋಜನ? ನಾಡಿನ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ ಎಂದು ಸಲಹೆ ಮಾಡಿದರು.

Tags:
error: Content is protected !!