ನಾಗಮಂಗಲ : ಬುದ್ಧಿ ಮತ್ತು ಕೌಶಲ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ವಿಪುಲ ಅವಕಾಶಗಳಿವೆ. ಆದರೆ, ಎಲ್ಲರಿಗೂ ಉದ್ಯೋಗ ಸಿಗುವುದು ಕಷ್ಟ. ಉದ್ಯಮಿಗಳಾಗುವತ್ತ ಹೆಚ್ಚು ಗಮನ ಹರಿಸಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡಬೇಕೆಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ಈ ಮೇಳ ನಡೆಸುತ್ತಿರುವ ಯುನಿಕ್ ಸ್ಕಿಲ್ ಸೋರ್ಸ್ ಸೆಲ್ಯೂಷನ್ ಸಂಸ್ಥೆಯ ಮುಖ್ಯಸ್ಥರು ನನಗೆ ಅತ್ಯಾಪ್ತರಾಗಿದ್ದು, ಮೇಳದಲ್ಲಿ ನೋಂದಾಯಿಸಿಕೊಂಡಿರುವ ಹೆಣ್ಣು ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡುತ್ತಾರೆ. ತರಬೇತಿ ವೇಳೆ ಉಚಿತ ಊಟ, ವಸತಿ ಸೇರಿದಂತೆ ೧೫ ಸಾವಿರ ರೂ. ಗೌರವಧನ ನೀಡಲಿದ್ದಾರೆ. ಹೆಣ್ಣು ಮಕ್ಕಳು ಧೈರ್ಯವಾಗಿ ಮುಂದೆ ಬಂದು ಇಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೇಳದಲ್ಲಿ ಭಾಗವಹಿಸಿರುವ ಗಂಡು ಮಕ್ಕಳಿಗೂ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ರಾಜ್ಯದಲ್ಲಿರುವ ಹಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಅವಕಾಶ ಕಲ್ಪಿಸಿಕೊಡಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಮುಗಿದ ನಂತರ ಉದ್ಯೋಗಿಯಾಗಬೇಕು ಅಥವಾ ಉದ್ಯಮಿಯಾಗಬೇಕು. ಕೃಷಿಯನ್ನೂ ಉದ್ಯಮ ಮಾಡಿಕೊಂಡರೆ ಪ್ರತಿ ತಿಂಗಳು ಕನಿಷ್ಠ ೫ ಸಾವಿರದಿಂದ ೨ ಲಕ್ಷ ರೂ. ವರೆಗೂ ಸಂಪಾದನೆ ಮಾಡಬಹುದು. ಆಗ ಉದ್ಯೋಗಕ್ಕಾಗಿ ಮತ್ತೊಬ್ಬರ ಮುಂದೆ ಕೈ ಕಟ್ಟಿ ನಿಲ್ಲುವ ಅಗತ್ಯ ಇರುವುದಿಲ್ಲ. ಸ್ವಯಂ ಉದ್ಯೋಗದಿಂದ ನಿಮ್ಮ ಗೌರವ ಹೆಚ್ಚಾಗಲಿದ್ದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಬಹುದು ಎಂದು ಕಿವಿಮಾತು ಹೇಳಿದರು.
ಇದನ್ನು ಓದಿ: ಕನ್ನಡ ಭಾಷೆ ರಾಜ್ಯದ ಅಸ್ಮಿತೆ : ಸಿಎಂ
ರಾಜ್ಯದಲ್ಲಿ ೭ ಕೋಟಿಗೂ ಅಧಿಕ ಜನಸಂಖ್ಯೆ ಇದ್ದು ೭ ಲಕ್ಷ ಸರ್ಕಾರಿ ಹುದ್ದೆಗಳಷ್ಟೆ ಲಭ್ಯವಿದೆ. ವಿದ್ಯೆ ಕಲಿತವರೆಲ್ಲರೂ ಸರ್ಕಾರಿ ಕೆಲಸವೇ ಬೇಕೆಂಬ ಹಠವನ್ನು ಬಿಡಬೇಕು. ಇಂಜಿನಿಯರಿಂಗ್ ಪದವಿ ಪಡೆದಿರುವ ಅನೇಕ ಯುವಕರು ಗ್ರಾಮಲೆಕ್ಕಿಗರಾಗಿ ನೇಮಕಗೊಂಡು ಹಳ್ಳಿಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಹಾಗಾಗಿ ತಮ್ಮ ವಿದ್ಯೆಗೆ ತಕ್ಕಂತೆ ಸ್ವ ಉದ್ಯೋಗ ಅಥವಾ ಉದ್ಯಮ ಕಂಡುಕೊಂಡರೆ ನೀವೇ ನೂರಾರು ಮಂದಿ ನಿರುದ್ಯೋಗಿಗಳಿಗೆ ಕೆಲಸ ಕೊಡಬಹುದು ಎಂದು ತಿಳಿಸಿದರು.
ಯುನಿಕ್ ಸ್ಕಿಲ್ ಸೋರ್ಸ್ ಸೆಲ್ಯೂಷನ್ ಸಂಸ್ಥೆ ಮುಖ್ಯಸ್ಥ ಕೆ.ಪಿ.ನಾಗೇಶ್ ಮಾತನಾಡಿ, ಸಚಿವರ ಕೋರಿಕೆಯಂತೆ ತಾಲ್ಲೂಕಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಿತ ಟಾಟಾ ಕಂಪೆನಿಗೆ ೧೮ ಸಾವಿರ ಉದ್ಯೋಗಿಗಳ ಅಗತ್ಯವಿದೆ. ಹಳ್ಳಿಗಳಲ್ಲಿ ಯುವ ಸಮುದಾಯಕ್ಕೆ ಕೆಲಸವಿಲ್ಲ. ಕಂಪೆನಿಗಳಲ್ಲಿ ಉದ್ಯೋಗಿಗಳಿಲ್ಲ. ಹಾಗಾಗಿ ಗ್ರಾಮೀಣ ಪ್ರದೇಶದ ಯುವ ಸಮುದಾಯ ಸಮಾನ್ಯ ಜ್ಞಾನ ಕೌಶಲ ಹೆಚ್ಚಿಸಿಕೊಳ್ಳಬೇಕು.
ಕಂಪೆನಿ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಯುನಿಕ್ ಸ್ಕಿಲ್ ಸೋರ್ಸ್ ಸೆಲ್ಯೂಷನ್ ಸಂಸ್ಥೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದರು.





