Mysore
25
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಸಚಿವರೆಲ್ಲಾ ಹೈಕಮಾಂಡ್‌ ಮಾತಿಗೂ ಬೆಲೆಕೊಡುತ್ತಿಲ್ಲ: ವಿಪಕ್ಷ ನಾಯಕ ಆರ್.ಅಶೋಕ್‌ ವ್ಯಂಗ್ಯ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಚಿವರು ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.‌ಅಶೋಕ್‌ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಕೆಳಗಿಳಿಸಿ, ಹೊಸಬರಿಗೆ ಸ್ಥಾನ ಸಿಗುವಂತೆ ಮಾಡಬೇಕು ಎಂದು ಸಚಿವರೇ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.

ನಿನ್ನೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಡಿಕೆಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಈ ವಿಚಾರದ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್‌ ಅವರು, ಸಿದ್ದರಾಮಯ್ಯ ಸಿಎಂ ಸ್ಥಾನ ಬಿಡುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ. ಮೊನ್ನೆ ಸುರ್ಜೆವಾಲಾ ಯಾರೂ ಕೂಡ ಬಹಿರಂಗವಾಗಿ ಮಾತನಾಡಬೇಡಿ ಎಂದು ಖಡಕ್‌ ಸೂಚನೆ ನೀಡಿದ್ದರು. ಆದರೆ ನಿನ್ನೆಯಿಂದಲೇ ಎಲ್ಲರೂ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಿಂದಲೇ ಸರ್ಕಾರ ಪತನವಾಗುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.

ಇನ್ನು ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಜಾತಿಗಣತಿ ವರದಿಗೆ ನಮ್ಮ ವಿರೋಧ ಇಲ್ಲ. ಎಲ್ಲರೂ ಒಪ್ಪುವಂತೆ ಜಾತಿಗಣತಿ ಆಗಬೇಕು. ಎಲ್ಲಾ ಮನೆಗಳ ಸಮೀಕ್ಷೆ ಆಗಬೇಕು. ಒಕ್ಕಲಿಗರು ಲಿಂಗಾಯತರನ್ನು ವಿಭಜಿಸಿದ್ದಾರೆ. ಇದೆಲ್ಲಾ ಕೇವಲ ಸಿದ್ದರಾಮಯ್ಯನವರ ಟ್ರಕ್ಸ್‌ ಅಷ್ಟೇ. ವೈಜ್ಞಾನಿಕವಾಗಿಯೇ ಜಾತಿಗಣತಿ ಆಗಬೇಕು ಎಂದು ಆಗ್ರಹಿಸಿದರು.

 

Tags: