ಬೆಂಗಳೂರು : ಮಹಿಳಾ ಮೀಸಲಾತಿ ಪರಿಕಲ್ಪನೆ ಕಾಂಗ್ರೆಸ್ನ ಕೂಸು. ಮಸೂದೆಗೆ ಸೋಲಾಗಲಿದೆ ಎಂದು ಗೊತ್ತಿದ್ದರೂ ಸರ್ವಾಧಿಕಾರಿಯಂತೆ ಯಾವುದೇ ಚರ್ಚೆ ಮಾಡದೆ, ವಿಧೇಯಕ ಅಂಗೀಕರಿಸಲು ಮುಂದಾಗಿದ್ದ ಬಿಜೆಪಿಯೇ ಮಹಿಳಾ ವಿರೋಧಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಸೋಲು ಕಂಡಿದ್ದಕ್ಕೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿರುವುದು ಅಪ್ರಸ್ತುತ ಎಂದರು.
ಮಹಿಳೆಯರಿಗೆ ಶಾಸನ ಸಭೆಯಲ್ಲಿ ಮೀಸಲಾತಿ ನೀಡಬೇಕು ಎಂದು ಮೊದಲು ಮಸೂದೆ ರೂಪಿಸಿದ್ದೆ ಕಾಂಗ್ರೆಸ್ ಪಕ್ಷ. ಆರಂಭದಿಂದಲೂ ನಮ ಪಕ್ಷ ಮಹಿಳಾ ಮೀಸಲಾತಿಗೆ ಬೆಂಬಲ ನೀಡುತ್ತಲೇ ಬಂದಿದೆ. ಈಗ ಸೂಕ್ತ ಸಮಯ ಅಲ್ಲ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಉದ್ದೇಶ ಪೂರ್ವಕವಾಗಿ ವಿಧೇಯಕವನ್ನು ಮಂಡಿಸಲಾಗಿತ್ತು. ಮಸೂದೆ ಮಂಡನೆಗೂ ಮೊದಲು ಚರ್ಚೆಯಾಗಬೇಕು ಎಂಬುದು ವಿರೋಧ ಪಕ್ಷಗಳ ನಿಲುವಾಗಿತ್ತು ಎಂದರು.
ಇದು ಪ್ರಜಾಪ್ರಭುತ್ವ, ಹಿಟ್ಲರ್ ಮಾದರಿಯ ಸರ್ವಾಧಿಕಾರಿ ಆಡಳಿತವಲ್ಲ. ಚುನಾವಣೆ ನಡೆಯುವ ಮಧ್ಯ ಭಾಗದಲ್ಲಿ ಕ್ಷೇತ್ರಗಳನ್ನೆ ಅದಲು ಬದಲು ಮಾಡುವ ಕಾನೂನು ಬೇಕಿರಲಿಲ್ಲ. ವಿಧೇಯಕವನ್ನು ಮಂಡಿಸುವ ಮೊದಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದರು.
ಮಸೂದೆಗೆ ಸೋಲಾಗಿರುವುದು ಇಂಡಿ ಕೂಟದ ಒಗ್ಗಟ್ಟಿನ ಪ್ರದರ್ಶನವಾಗಿದೆ. ಒಮತವಾಗಿ ನಿಂತ ಎಲ್ಲ ಸಂಸದರನ್ನು ಅಭಿನಂದಿಸುತ್ತೇನೆ ಎಂದರು.
ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ಆಸ್ತಿ ಮಾತ್ರ ಅಲ್ಲ. ಇದು ದೇಶದ ಎಲ್ಲರಿಗೂ ಸೇರಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಒತ್ತಾಸೆಯ ಮೇರೆಗೆ ಯುಪಿಎ ಸರ್ಕಾರದಲ್ಲೆ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ ಪಡೆಯಲಾಗಿತ್ತು. ಲೋಕಸಭೆಯಲ್ಲಿ ಸೋಲುಂಟಾಯಿತು. ಕಾಂಗ್ರೆಸ್ ಸದಾ ಕಾಲ ಮಹಿಳೆಯರ ಮೀಸಲಾತಿ ಪರವಾಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ಎಲ್ಲರ ಜೊತೆ ಚರ್ಚೆ ಮಾಡಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಬೇಕಿತ್ತು. ವಿರೋಧ ಪಕ್ಷಗಳ 240 ಜನ ಸಂಸದರು ಗೆದ್ದಿಲ್ಲವೇ, ಏಕೆ ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡುವಾಗ ಆಗಿನ ಪ್ರಧಾನಿ ರಾಜೀವ್ ಗಾಂಧಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲವೇ, ಈಗಲೂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಬಿಜೆಪಿಯವರು ದುರುದ್ದೇಶ ಪೂರ್ವಕವಾಗಿ ದಕ್ಷಿಣ ಭಾರತದ ಲೋಕಸಭಾ ಕ್ಷೇತ್ರಗಳನ್ನು ಕಡಿತ ಮಾಡಿ, ಉತ್ತರ ಭಾರತದ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸಂಚು ನಡೆಸಿದ್ದರು. ಅದಕ್ಕಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಮುಂದಿಟ್ಟಿದ್ದರು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಕ್ಷೇತ್ರಗಳ ಸಂಖ್ಯೆ ಏರುಪೇರಾಗುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ದಕ್ಷಿಣ ಭಾರತದ ಮುಖ್ಯಮಂತ್ರಿಗಳು ವಿರೋಧಿಸಿ ಪ್ರತಿಭಟಿಸಿದ್ದರು. ಮಸೂದೆಗೆ ಸೋಲಾಗಿರುವುದು ಪ್ರಜಾಪ್ರಭುತ್ವಕ್ಕಾದ ಗೆಲುವು. ಮಸೂದೆ ಸೋಲಿನಿಂದ ಆಡಳಿತಾರೂಢ ಬಿಜೆಪಿಗೆ ಮುಖಭಂಗವಾಗಿದೆ ಎಂದು ಹೇಳಿದರು.





