ಬೆಂಗಳೂರು: ಕರ್ನಾಟಕ ರಾಜ್ಯವು ಲೂಟಿಕೋರರು, ದರೋಡೆಕೋರರ ಸ್ವರ್ಗವಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಟಿ.ಎ.ಶರವಣ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.21) ರಾಜ್ಯದಲ್ಲಾಗುತ್ತಿರುವ ದರೋಡೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್, ಮಂಗಳೂರು, ಮೈಸೂರಿನಲ್ಲಿ ದರೋಡೆ ಪ್ರಕರಣಗಳು ನಡೆದಿದ್ದು ರಾಜ್ಯದಲ್ಲಿ ಗೃಹ ಇಲಾಖೆ ಇದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಯನ್ನು ರಾಜ್ಯದ ಜನರು ಮಾತಾಡುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ನಗರ್ತಪೇಟೆಯ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಎಂಟೂವರೆ ಕೆ.ಜಿ.ಚಿನ್ನವನ್ನು ಲೂಟಿ ಮಾಡಲಾಗಿದೆ. ನನ್ನ ಅಂಗಡಿಯ ಒಂದೂಕಾಲು ಕೆ.ಜಿ.ಚಿನ್ನವನ್ನು ಹಾಲ್ಮಾರ್ಕ್ ಸೆಂಟರ್ಗೆ ಕೊಟ್ಟಾಗ ಕಳ್ಳತನವಾಗಿದೆ ಎಂದು ಅವರು ಆರೋಪಿಸಿದರು. ಹೀಗಾಗಿ ರಾಜ್ಯದಲ್ಲಿ ಜನರು ಸುರಕ್ಷಿತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಅಲ್ಲದೇ ಭಯದ ವಾತಾವರಣವಿದ್ದು, ಹೂಡಿಕೆದಾರರು ಸುರಕ್ಷತೆಯ ಪ್ರಶ್ನೆ ಮಾಡುವಂತಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೂ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಇಂದು ಮಹಾತ್ಮ ಗಾಂಧೀಜಿ ಅವರ ಹೆಸರಲ್ಲಿ ಭಜನೆ ಮಾಡುತ್ತ ಕುರ್ಚಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಾಗುತ್ತಿರುವ ದರೋಡೆಗಳ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರಾಜ್ಯದ ಜನರಿಗೆ ರಕ್ಷಣೆ ಕೊಡಬೇಕು ಹಾಗೂ ಪೊಲೀಸ್ ಇಲಾಖೆಯನ್ನು ಬಿಗಿಗೊಳಿಸಬೇಕು. ಜೊತೆಗೆ ಅಪರಾಧ ಪ್ರಕರಗಳನ್ನು ಕಡಿಮೆ ಮಾಡಬೇಕು ಎಂದು ಅವರು ಆಗ್ರಹಿಸಿದರು.