ಬೆಂಗಳೂರು : ಕಳೆದ ತಿಂಗಳು ಆರ್.ಸಿ.ಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿ ನ್ಯಾ.ಮೈಕಲ್ ಕುನ್ಹಾ ಅವರು ನೀಡಿರುವ ವರದಿಯನ್ನು ರಾಜ್ಯಸರ್ಕಾರ ಒಪ್ಪಿಕೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವರದಿಯ ಬಗ್ಗೆ ಚರ್ಚೆಯಾಗಿದೆ. ನ್ಯಾಯಮೂರ್ತಿಗಳು ಶಿಫಾರಸ್ಸು ಮಾಡಿದಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಂಪುಟ ಸಹಮತಿಸಿದೆ ಎಂದರು.
ಕರ್ತವ್ಯ ಲೋಪ ಎಸಗಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುವುದು. ಖಾಸಗಿ ಸಂಸ್ಥೆಗಳಾದ ಆರ್.ಸಿ.ಬಿ, ಕರ್ನಾಟಕ ರಾಜ್ಯಕ್ರಿಕೆಟ್ ಸಂಸ್ಥೆ, ಡಿಎನ್ಎ ಸಂಸ್ಥೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಹಾಗೂ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಸಚಿವರು ತಿಳಿಸಿದರು.





