ಬೆಂಗಳೂರು : ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನಿಂದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪರೀಕ್ಷೆಯಲ್ಲಿ ತೇರ್ಗಡೆಯ ಅಂಕಗಳನ್ನು ಕಡಿತಗೊಳಿಸಲಾಗಿದ್ದು, ಶೇ.33ರಷ್ಟು ಅಂಕ ಪಡೆದವರನ್ನು ತೇರ್ಗಡೆ ಮಾಡುವ ಮಹತ್ವದ ನಿರ್ಧಾರವನ್ನು ಶಿಕ್ಷಣ ಇಲಾಖೆ ತೆಗೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ನೀಡಿದೆ.
ಇಷ್ಟು ವರ್ಷ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 35% ಒಟ್ಟು ಅಂಕಗಳು ಪಾಸ್ ಆಗಲು ಕಡ್ಡಾಯವಾಗಿತ್ತು. ಆದರೆ, ಇದೀಗ ರಾಜ್ಯ ಸರ್ಕಾರವು ಈ ಪಾಸಿಂಗ್ ಅಂಕವನ್ನು 33%ಕ್ಕೆ ಇಳಿಸಿದೆ. ಎಸ್ಎಸ್ಎಲ್ಸಿಯಲ್ಲಿ ಒಟ್ಟು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು (ಅಂದರೆ 33%) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಆದರೆ, ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ ತಿಳಿಸಿದರು.
ಬುಧವಾರ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ 33% ಅಂಕ ಪಡೆದರೆ ಎಸ್ಎಸ್ಎಲ್ಸಿ ಉತ್ತೀರ್ಣ ಎಂದು ಘೋಷಿಸಲಾಗುವುದು. ಅಲ್ಲಿಗೆ 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ. ಆಂತರಿಕ ಅಂಕ, ಬಾಹ್ಯ ಅಂಕ ಎರಡು ಸೇರಿ 33% ಪಡೆಯಬೇಕಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ 3 ಪರೀಕ್ಷೆ ವ್ಯವಸ್ಥೆ ಜಾರಿ ಮಾಡಿದ್ದೇವೆ. ಪಾರದರ್ಶಕವಾಗಿ ಇರಲಿ ಅಂತ ವೆಬ್ ಕ್ಯಾಸ್ಟ್ ಮಾಡಿದ್ವಿ. ಪರೀಕ್ಷೆಗಳು ಉತ್ತಮವಾಗಿ ನಡೆದವು. ವೆಬ್ ಕ್ಯಾಸ್ಟಿಂಗ್ ನಿಂದ ಕಡಿಮೆ ಅಂಕ ಬಂದಾಗ ಶಿಕ್ಷಕರು ಜವಾಬ್ದಾರಿ ತಗೊದುಕೊಂಡು ಕೆಲಸ ಮಾಡಿದ್ದಾರೆ.. ವಿಶೇಷ ತರಗತಿ ಪಡೆದು ವಿದ್ಯಾರ್ಥಿಗಳನ್ನ ತಯಾರು ಮಾಡಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ. ಇದೀಗ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು 33% ಉತ್ತೀರ್ಣ ಅಂಕ ನಿಗದಿ ಮಾಡಲಾಗಿದೆ. 625ಕ್ಕೆ 206 ಅಂಕ ಪಡೆದರೆ ಅಥವಾ ಆಯಾ ವಿಷಯದ ಒಟ್ಟು ಅಂಕಗಳಲ್ಲಿ 30 ಅಂಕ ಪಡೆದಿರಬೇಕು. ಆಂತರಿಕ ಮತ್ತು ಬಾಹ್ಯ ಅಂಕ ಸೇರಿ ಒಟ್ಟು 33% ಅಂಕ ಪಡೆದ ವಿದ್ಯಾರ್ಥಿಯನ್ನ ಉತ್ತೀರ್ಣ ಎಂದು ಘೋಷಿಸಲಾಗುತ್ತದೆ.2025-26ನೇ ಸಾಲಿನಿಂದ ಈ ನಿಯಮ ಜಾರಿಗೆ ಬರಲಿದೆ. ಈ ವರ್ಷ ಹಾಜರಾಗುವ ೀ ಎಲ್ಲಾ ವಿದ್ಯಾರ್ಥಿಗಳು, ರಿಪೀಟರ್ಸ್, ಖಾಸಗಿ ಅಭ್ಯರ್ಥಿಗಳಿಗೂ ಈ ನಿಯಮ ಜಾರಿಯಾಗಲಿದೆ.
ಇದನ್ನು ಓದಿ : ಎಸ್ಎಸ್ಎಲ್ಸಿ, ಪಿಯುಸಿ ಮಕ್ಕಳಿಗೆ ಗುಡ್ನ್ಯೂಸ್: ಏನದು ಗೊತ್ತಾ?
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆಯಬೇಕು. ಪ್ರತಿ ವಿಷಯದಲ್ಲೂ ಲಿಖಿತ/ಪ್ರಾಯೋಗಿಕ/ಆಂತರಿಕ ಅಂಕಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕು. ಒಟ್ಟು 600 ಅಂಕಗಳಿಗೆ 198 ಅಂಕಗಳನ್ನು ಪಡೆದ ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ನಿಯಮವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಅನ್ವಯ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಈ ಹೊಸ ನಿಯಮದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡ ಕಡಿಮೆಯಾಗಲಿದೆ. ಒಟ್ಟಾರೆ 33% ಸರಾಸರಿ ಇದ್ದರೆ ಮತ್ತು ಎಲ್ಲ ವಿಷಯಗಳಲ್ಲಿ ಕನಿಷ್ಠ 30 ಅಂಕಗಳು ಬಂದರೆ, ವಿದ್ಯಾರ್ಥಿಗಳು ಉತ್ತೀರ್ಣರಾಗಬಹುದು. ಉದಾಹರಣೆಗೆ, ಎಸ್ಎಸ್ಎಲ್ಸಿಯಲ್ಲಿ ಒಟ್ಟು 625ಕ್ಕೆ 206 ಅಂಕಗಳಿದ್ದರೂ, ಪ್ರತಿ ವಿಷಯದಲ್ಲಿ 30 ಅಂಕಗಳನ್ನು ಕಡ್ಡಾಯವಾಗಿ ಗಳಿಸಬೇಕು. ಅದೇ ರೀತಿ, ಪಿಯುಸಿಯಲ್ಲಿ 600ಕ್ಕೆ 198 ಅಂಕಗಳಿದ್ದರೂ, ಪ್ರತಿ ವಿಷಯದಲ್ಲಿ 30 ಅಂಕಗಳು ಕಡ್ಡಾಯವಾಗಿರುತ್ತವೆ. ಈ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದರು.
ಸಿಬಿಎಸ್ಇ ಮತ್ತು ನೆರೆ ರಾಜ್ಯಗಳಲ್ಲಿ ಉತ್ತೀರ್ಣತೆ ಅಂಕಗಳಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳಲ್ಲೂ ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ಪಡೆಯಬೇಕೆಂಬ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯ ಆಡಳಿತ ಸುಧಾರಣಾ ಆಯೋಗವು ಕೂಡ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು. ಇದುವರೆಗೂ ಎಸ್ಎಸ್ ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಲು ಕನಿಷ್ಠ ಶೇ.35ರಷ್ಟು ಅಂಕಗಳನ್ನು ಪಡೆಯಬೇಕೆಂಬ ನಿಯಮವಿತ್ತು ಎಂದು ಅವರು ಹೇಳಿದರು.
ಈ ಬದಲಾವಣೆಯು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಸಕಾರಾತಕ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತಷ್ಟು ವಿವರಗಳನ್ನು ಒದಗಿಸಲಿದೆ.ತೇರ್ಗಡೆಯ ಕನಿಷ್ಠ ಅಂಕಗಳನ್ನು ಕಡಿತ ಮಾಡುವುದಕ್ಕೆ ಸಾರ್ವಜನಿಕ ಸಲಹೆ-ಸೂಚನೆಗೆ ಅವಕಾಶ ಕಲ್ಪಿಸಲಾಗಿತ್ತು. ಶೇ. 33ರಷ್ಟು ಅಂಕಗಳ ಪರವಾಗಿ 701 ಪತ್ರಗಳು ಬಂದಿದ್ದವು. ಶೇ. 35 ರಷ್ಟು ಅಂಕಗಳ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು. ಹೀಗಾಗಿ ಶೇ.33ರಷ್ಟು ಅಂಕಗಳನ್ನು ತೇರ್ಗಡೆಗೆ ಪರಿಗಣಿಸಲು ತೀರ್ಮಾನಿಸಲಾಗಿದೆ.ಪರೀಕ್ಷೆಯ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅತಿ ಮುಖ್ಯವಾಗುತ್ತದೆ. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದ್ದವು. ವಿದ್ಯಾರ್ಥಿಗಳು ಬೇರೆ ವ್ಯವಸ್ಥೆಯಲ್ಲಿ ಉತ್ತೀರ್ಣರಾದರೆ ಮುಂದೆ ತೊಂದರೆಯಾಗುತ್ತದೆ. ಹೀಗಾಗಿ ವೆಬ್ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸುತ್ತಿದ್ದೇವೆ. ವಾರ್ಷಿಕ ಮೂರು ಪರೀಕ್ಷೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶಿ ಮಹೇಶ್, ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್, ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕರಾದ ವಿದ್ಯಾಕುಮಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





