ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಮೀಕ್ಷಾದಾರರಿಗೆ ಮೊದಲ ಕಂತಿನ ಗೌರವಧನ ತಲಾ 5 ಸಾವಿರ ರೂ. ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ 1,20,728 ಸಮೀಕ್ಷಾದಾರರಿಗೆ ಮೊದಲ ಕಂತಿನಲ್ಲಿ ತಲಾ 5000 ರೂ.ನಂತೆ ಗೌರವಧನವನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಒಟ್ಟು 60,36,40,000 ರೂ.ಗಳನ್ನು ಸಮೀಕ್ಷಾ ಉದ್ದೇಶಕ್ಕಾಗಿ ನಿಗಮಗಳಿಂದ ಆಯೋಗದ ಖಾತೆಗೆ ವರ್ಗಾವಣೆಯಾಗಿರುವ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಹೆಸರಿನಲ್ಲಿರುವ ಪಿಡಿ ಖಾತೆ/ಬ್ಯಾಂಕ್ ಖಾತೆಗೆ ಹಲವು ನಿಬಂಧನೆಗಳಿಗೆ ಒಳಪಟ್ಟು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಸಮೀಕ್ಷಾದಾರರಿಗೆ ತಲಾ 5 ಸಾವಿರ ರೂ.ನಂತೆ ಮೊದಲ ಕಂತಿನ ಗೌರವಧನ ನೀಡಲು ಬಳಸಬೇಕು. ಉಳಿದ ಅನುದಾನವನ್ನು ಮುಂದಿನ ಕಂತಿನಲ್ಲಿ ಬಿಡುಗಡೆ ಮಾಡಲಾಗುವುದು.
ಬಿಡುಗಡೆ ಮಾಡಲಾದ ಅನುದಾನ ಮತ್ತು ವೆಚ್ಚದ ವಿವರವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ನಿಯಮಾನುಸಾರ ವೆಚ್ಚ ಮಾಡಿದ ನಂತರ ಹಣ ವಿನಿಯೋಗ ಪ್ರಮಾಣಪತ್ರವನ್ನು ಆಯೋಗಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.





