Mysore
31
scattered clouds

Social Media

ಶನಿವಾರ, 16 ಮೇ 2026
Light
Dark

ರಾಜ್ಯಕ್ಕೂ ಬಂತು ಎಸ್‌ಐಆರ್‌ ; ಜೂನ್‌ನಿಂದ ಆರಂಭ

ಬೆಂಗಳೂರು : ಇಡೀ ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಎಸ್‌ಐಆರ್ ಪ್ರಕ್ರಿಯೆ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದ ʼಎಸ್‌ಐಆರ್‌ʼ ಅಂದರೆ ʻಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆʼ ಪ್ರಕ್ರಿಯೆ ಇದೀಗ ಕರ್ನಾಟಕದಲ್ಲಿ ಅಧಿಕೃತವಾಗಿ ಜೂನ್‌ನಿಂದ ಶುರುವಾಗಲಿದೆ.

ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಸಂಪೂರ್ಣ ಸಿದ್ಧಗೊಂಡಿದೆ. ಚುನಾವಣಾ ಆಯೋಗದ ಈ ಮಹತ್ವದ ನಿರ್ಧಾರದಿಂದ ಕೋಟ್ಯಂತರ ಮತದಾರರಲ್ಲಿ ಕುತೂಹಲ ಮತ್ತು ಆತಂಕ ಎರಡೂ ಮನೆಮಾಡಿದೆ. ಹಾಗಾದರೆ ಏನಿದು ಎಸ್‌ಐಆರ್ ಪ್ರಕ್ರಿಯೆ?, ಇದು ಯಾಕೆ ಇಷ್ಟೊಂದು ಸದ್ದು ಮಾಡುತ್ತಿದೆ? ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸುರಕ್ಷಿತವಾಗಿರಬೇಕೆಂದರೆ ನೀವು ಏನು ಮಾಡಬೇಕು?, ಏನೆಲ್ಲಾ ದಾಖಲೆಗಳನ್ನು ನೀಡಬೇಕು? ದಾಖಲೆಗಳನ್ನು ಸಲ್ಲಿಸದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದು ಇಲ್ಲಿದೆ ನೋಡಿ.

ಮುಕ್ತ ಮತ್ತು ವಿಶ್ವಾಸಾರ್ಹ ಚುನಾವಣೆ ನಡೆಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ ಅಥವಾ ಎಸ್‌ಐಆರ್‌ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಸಿದ್ಧತೆಗಳನ್ನ ಪೂರ್ಣಗೊಳಿಸಿದೆ.

ಎಸ್‌ಐಆರ್‌ ಅನ್ನು ಕಾಲಕಾಲಕ್ಕೆ ಕೇಂದ್ರ ಚುನಾವಣಾ ಆಯೋಗ ನಡೆಸುತ್ತದೆ. ಮತಪಟ್ಟಿಗೆ ಅರ್ಹರ ಹೆಸರು ಸೇರ್ಪಡೆ, ಅನರ್ಹರ ಹೆಸರು ರದ್ದತಿ, ಎರಡೆರಡು ಕಡೆ ಹೆಸರು ನೊಂದಾಯಿಸಿಕೊಂಡವ ಹೆಸರು ಒಂದು ಕಡೆ ರದ್ದು, ಮೃತಪಟ್ಟವರ ಹೆಸರು ರದ್ದು, ವಾಸಸ್ಥಳ ಬದಲಾಗಿದ್ದವರ ಹೆಸರು ರದ್ದು ಸೇರಿದಂತೆ ಮೊದಲಾದ ಕಾರಣಕ್ಕೆ ಈ ಪ್ರಕ್ರಿಯೆ ನಡೆಸಲಾಗುತ್ತದೆ. ಇತ್ತೀಚೆಗೆ ಬಿಹಾರ, ಪಶ್ಚಿಮಬಂಗಾಳ, ತಮಿಳುನಾಡು ಸೇರಿದಂತೆ 9 ರಾಜ್ಯ ಮೂರು ಕೇಂದ್ರಡಳಿತ ಪ್ರದೇಶಗಳಲ್ಲಿ ಇದೇ ಪ್ರಕ್ರಿಯೆ ನಡೆಸಲಾಗಿದೆ. ಇದೀಗ ಇದೇ ಪ್ರಕ್ರಿಯೆ ಕರ್ನಾಟಕದಲ್ಲೂ ನಡೆಯಲಿದೆ.

ಅಧಿಕಾರಿಗಳು ನಿಮ್ಮ ಮನೆಗೆ ಎಸ್‌ಐಆರ್‌ ಪ್ರಕ್ರಿಯೆಗೆ ಬಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗದ ಗುರುತಿನ ಚೀಟಿ, ಪಿಂಚಿಣಿದಾರರ ಐಡಿ ಕಾರ್ಡ್‌, ಸಾರ್ವಜನಿಕ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್‌, ಶೈಕ್ಷಣಿಕ ಪ್ರಮಾಣಪತ್ರಗಳು, ಕಾಯಂ ನಿವಾಸ, ಯಾವುದೇ ಜಾತಿ ಪ್ರಮಾಣಪತ್ರಗಳ, ಅರಣ್ಯ ಹಕ್ಕು, ಜಮೀನು ಹಂಚಿಕೆ ಪ್ರಮಾಣಪತ್ರಗಳನ್ನು ದಾಖಲೆಯಾಗಿ ಸಲ್ಲಿಸಬಹುದು. ಇನ್ನೂ ಆಧಾರ್‌ ಗುರುತಿನ ಚೀಟಿಯಾದರೂ ಇದು ಪೌರತ್ವವನ್ನು ದೃಢೀಕರಿಸಲ್ಲ.

2025ರ ಮತದಾರರ ಪಟ್ಟಿಯಲ್ಲಿ ಈಗಾಗಲೇ ನಿಮ್ಮ ಹೆಸರಿದ್ದರೆ ಆಯೋಗದಿಂದಲೇ ಮುದ್ರಿತ ಅರ್ಜಿಯನ್ನು ಮನೆಗೆ ತಲುಪಿಸಲಾಗುತ್ತದೆ. ಪರಿಷ್ಕರಣೆ ನಡೆಸಲು ಬೂತ್‌ ಮಟ್ಟದ ಅಧಿಕಾರಿಗಳು ಕ್ಯಾಂಪ್‌ ನಡೆಸುತ್ತಾರೆ. ಸರ್ಕಾರ ನಿಗದಿ ಪಡಿಸಿದ ದಾಖಲೆ ಸಲ್ಲಿಸಿದರೆ ಅರ್ಜಿಯನ್ನು ಸ್ಕ್ಯಾನ್‌ ಮಾಡಿ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಬಿಎಲ್‌ಓಗಳು ಅಪ್ಲೋಡ್‌ ಮಾಡಲಿದ್ದಾರೆ. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಬಿಎಲ್‌ಓ ಒಂದು ಅರ್ಜಿ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಿ, ಮತ್ತೊಂದನ್ನು ನಿಮಗೆ ನೀಡಲಿದ್ದಾರೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ಕರಡು ಪ್ರತಿ ಪ್ರಕಟವಾಗುತ್ತದೆ. ಅಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಹೊಸದಾಗಿ ಅರ್ಜಿ ಸ್ವೀಕರಿಸಿ ಹೆಸರು ಸೇರ್ಪಡೆ ಸಹ ಮಾಡಲಾಗುತ್ತದೆ.

ಒಟ್ಟಾರೆಯಾಗಿ ಕರ್ನಾಟದಲ್ಲಿ ಜೂನ್‌ನಿಂದ ಆರಂಭವಾಗಲಿರುವ ಎಸ್‌ಐಆರ್‌ ತುಂಬಾ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ರಾಜ್ಯದ ಸುಮಾರು 2ಕೋಟಿ ಮತದಾರರಲ್ಲಿ ವ್ಯತ್ಯಸಗಳಿವೆ ಎಂದು ಆಯೋಗ ಹೇಳಿರುವುದು ಆತಂಕ ಮೂಡಿಸಿದೆ. ಎಸ್‌ಐಆರ್‌ ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ರಾಜ್ಯದಲ್ಲಿ ಅದೆಷ್ಟು ವಿವಾದಗಳನ್ನು ಸೃಷ್ಟಿಸುತ್ತೊ ಕಾದು ನೋಡಬೇಕು. ಏನೇ ಆಗಲಿ ಆಯೋಗವು ನಿಗದಿ ಪಡಿಸಿರುವ ದೃಢಿಕೃತ ಪ್ರತಿಗಳನ್ನು ಈಗಲೇ ಸಿದ್ಧಪಡಿಸಿಕೊಳ್ಳಿ, ಇಲ್ಲದಿದ್ದರೆ ಸಣ್ಣ ನಿರ್ಲಕ್ಷ್ಯದಿಂದ ನಿಮ್ಮ ಹೆಸರು ಚುನಾವಣಾ ಪಟ್ಟಿಯಿಂದ ಶಾಶ್ವತವಾಗಿ ಅಳಸಿಹೋಗಬಹುದು.

Tags:
error: Content is protected !!