ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕಮಿಷನ್ ದಂಧೆಗಾಗಿ ಕರ್ನಾಟಕವನ್ನು ಕತ್ತಲೆಗೆ ದೂಡಿದೆ. ಕಾಂಗ್ರೆಸ್ ನಾಯಕರೇ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದು, ರಾಜ್ಯದ ಅಭಿವೃದ್ಧಿ ನಿಂತರೂ ಕಾಂಗ್ರೆಸ್ಸಿಗರ ಅಭಿವೃದ್ಧಿ 60% ಏರುಗತಿಯಲ್ಲಿದೆ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.7) ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಕಮಿಷನ್ ಹಾವಳಿಯಿಂದಾಗಿ ಗುತ್ತಿಗೆದಾರರು, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರಾಜ್ಯಪಾಲರಿಗೆ ಅರ್ಜಿ ಹಾಕುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಶಾಸಕರೇ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ನ ಶಾಸಕರ ಅಭಿವೃದ್ಧಿ ಮಾತ್ರ ಏರುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವಂತೆ 40 ಪರ್ಸೆಂಟ್ನಿಂದ 60 ಪರ್ಸೆಂಟ್ಗೆ ಏರಿಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇತ್ತಿಚೀನ ದಿನಗಳಲ್ಲಿ ಹೇಗೆ ಹಾಲು, ಪೆಟ್ರೋಲ್ ಮತ್ತು ಬಸ್ನ ಪ್ರಯಾಣ ದರದ ಮೇಲೆ ಏರಿಕೆ ಮಾಡಿದೆಯೋ, ಅಂತೆಯೇ ಕಾಂಗ್ರೆಸ್ ಶಾಸಕರು ತಮ್ಮ ಕಮಿಷನ್ ಹೆಚ್ಚಿಸಿಕೊಂಡು ಅಭಿವೃದ್ಧಿಯಾಗುತ್ತಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್ ಶೇ.60ರಷ್ಟು ಕಮಿಷನ್ನಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಜಿ.ಪರಮೇಶ್ವರ್ ಡಿನ್ನರ್ ಪಾರ್ಟಿ ಕುರಿತು ವ್ಯಂಗ್ಯ
ಸತೀಶ್ ಜಾರಕಿಹೊಳಿ ಅವರ ಡಿನ್ನರ್ ಮೀಟಿಂಗ್ ಆಯ್ತು ಈಗ ಡಾ.ಪರಮೇಶ್ವರ್ ಅವರ ಸರದಿಯಾಗಿದೆ. ಸದನದಲ್ಲಿ ಡಿ.ಕೆ.ಶಿವಕುಮಾರ್ ಅವರು ಒದ್ದು ಅಧಿಕಾರ ಕಿತ್ತುಕೊಳ್ಳುತ್ತೇನೆ ಎಂದು ಅಬ್ಬರಿಸಿದಾಗಿನಿಂದ ಕೆರಳಿ ಕೆಂಡವಾದಂತಿರುವ ಅವರ ವಿರೋಧಿ ಬಣ, ಅದು ಹೇಗೆ ಒದ್ದು ಕಿತ್ತುಕೊಳ್ಳುತ್ತಾರೋ ನೋಡೇ ಬಿಡೋಣ ಎಂದು ಸವಾಲು ಹಾಕಿದಂತೆ ಡಿನ್ನರ್ ಮೀಟಿಂಗ್ಗಳ ಮೇಲೆ ಮೀಟಿಂಗ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಡಿನ್ನರ್ ಪಾಲಿಟಿಕ್ಸ್ನಲ್ಲಿ winner ಯಾರೋ ಗೊತ್ತಿಲ್ಲ, ಆದರೆ loser ಮಾತ್ರ ಕರ್ನಾಟಕ. ಯಾರು ಯಾರಿಗೆ ಒದೆಯುತ್ತಾರೋ, ಯಾರು ಯಾರ ಕೈಯಲ್ಲಿ ಒದ್ದಿಸಿಕೊಳ್ಳುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಅಭಿವೃದ್ಧಿ ಇಲ್ಲದೆ ಸೊರಗುತ್ತಿರುವ ಕನ್ನಡಿಗರ ಒದ್ದಾಟ ಮಾತ್ರ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.