ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿರುವುದನ್ನೇ ನಿನ್ನೆ ಎಐಸಿಸಿ ಅಧ್ಯಕ್ಷರು ಪುನರ್ ಉಚ್ಚಾರಿಸಿದ್ದಾರೆ ಅಷ್ಟೇ. ಯಾರ ಬಾಯಿಗೂ ಹಾಕಲು ಸಾಧ್ಯವಿಲ್ಲ ಎಂದು ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.18) ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರು ಸರ್ಕಾರದಲ್ಲಿ ಎಲ್ಲರೂ ಬಹಿರಂಗ ಹೇಳಿಕೆ ನೀಡದೇ ಪಕ್ಷ ಮತ್ತು ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂದು ಹೇಳಿದ್ದರು. ನಿನ್ನೆ ಅದನ್ನೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ ಅಷ್ಟೇ. ನಾವು ಹೇಳಿಕೆಗಳನ್ನು ನೀಡುವಾಗ ವಿವೇಚನೆ ಬಳಸಿ ಹೇಳಿಕೆಗಳನ್ನು ನೀಡಬೇಕು. ಬಹಿರಂಗ ಮಾತಿನಿಂದ ಪಕ್ಷಕ್ಕೆ ಹಾನಿ ಆಗುತ್ತೊ ಅಥವಾ ಇಲ್ಲವಾ ಎಂಬುದನ್ನು ಯೋಚಿಸಬೇಕು. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆಯಂತೆ ಅವರವರ ಮಾತಿನ ಸೂಕ್ಷ್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಪಕ್ಷದಲ್ಲಿ ಅಧಿಕಾರ ಸಿಕ್ಕ ಮೇಲೆ ಕಾಂಗ್ರೆಸ್ ಪಕ್ಷ ಯಾವುದು? ಎಐಸಿಸಿ ಅಧ್ಯಕ್ಷರು ಯಾರು? ರಾಹುಲ್ ಗಾಂಧಿ ಯಾರು? ಅಥವಾ ಹೈಕಮಾಂಡ್ ಏನು ಮಾಡುತ್ತೇ ಎನ್ನುವುದು ಸರಿಯಲ್ಲ. ಈಗಾಗಲೇ ಸಿಎಂ, ಡಿಸಿಎಂ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂದೇಶ ನೀಡಿದ್ದಾರೆ. ಆ ಸೂಚನೆ ಮೇರೆಗೆ ನಾವು ಕೆಲಸ ಮಾಡಬೇಕು ಎಂದು ಹೇಳಿದರು.
ಮುಡಾ ಹಗರಣದಲ್ಲಿ ಬಿಜೆಪಿಯವರು ಆಳಕ್ಕೆ ಹೋದಷ್ಟೂ ಅವರಿಗೆ ಅವಮಾನ
ಮುಡಾ ಹಗರಣದ ಬಗ್ಗೆ ಇ.ಡಿ.ನೀಡಿರುವ ವರದಿ ಆಧಾರಿಸಿ ಬಿಜೆಪಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ 10-15 ವರ್ಷಗಳಿಂದ ಎಲ್ಲಾ ಹರ್ಬನ್ ಡೆವಲಪ್ಮೆಂಟ್ಗಳಲ್ಲೂ ಐಟಿ ಮತ್ತು ಇ.ಡಿ. ಅವರಿಗೆ ತನಿಖೆ ಮಾಡಿ ಎಂದೇ ಹೇಳುತ್ತಿದ್ದೇವೆ. ಆದರೆ ಬಿಜೆಪಿಯವರು ಮುಡಾ ಹಗರಣದಲ್ಲಿ, ಕಿಯಾನಿಕ್ಸ್ ಸೇರಿದಂತೆ ಬೇರೆ ಯಾವ ಪ್ರಕರಣದಲ್ಲೂ ಆಳಕ್ಕೆ ಹೋದಷ್ಟು ಅವರೇ ಅವಮಾನ ಅನುಭವಿಸುತ್ತಾರೆ. ಅಲ್ಲದೇ ಅವರೇ ಮೂಗು ಕೂಯ್ದೂಕೊಳ್ಳುತ್ತಾರೆ. ಮೊನ್ನೆ ಕಿಯಾನಿಕ್ಸ್ ಹಗರಣದಲ್ಲಿ ಏನಾಯ್ತು? ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯಾವ ಐಟಿ, ಇ.ಟಿ. ಬೇಕಾದರೂ ತನಿಖೆ ಮಾಡಲಿ ಎಂದು ಹೇಳಿದ್ದಾರೆ. ಅದರಂತೆಯೇ ಅವರ ಕಾಲದಲ್ಲಾದ ಹಗರಣಗಳು ಸಹ ಪತ್ತೆಯಾಗಿ ಬೆಳಕಿಗೆ ಬರುತ್ತವೆ.
ಇದೇ ಸಂದರ್ಭದಲ್ಲಿ ಡಿನ್ನರ್ ಪಾರ್ಟಿ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅವರು ಮೊದಲು ಕಾಂಗ್ರೆಸ್ ಬಗ್ಗೆ ಮಾತನಾಡುವುದನ್ನು ಬಿಟ್ಟು, ಅವರ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲಗಳ ಬಗ್ಗೆ ಗಮನಹರಿಸಬೇಕು. ಅವರೇ ಅಧಿಕೃತವಾಗಿ ಫೆಬ್ರವರಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾಗುತ್ತಾರೆ ಎಂದಿದ್ದಾರೆ. ಅಲ್ಲದೇ ಆ ಪಕ್ಷದಲ್ಲಿಯೇ ಯಾರ ನೇತೃತ್ವದಲ್ಲಿ ಪಕ್ಷವನ್ನು ಹಾಳು ಮಾಡಬೇಕೆಂದು ತಯಾರಿ ನಡೆಸುತ್ತಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಇಂತಹ ಯಾವುದೇ ಆಲೋಚನೆಗಳಾಗಲಿ ಅಥವಾ ಗೊಂದಲಗಳಾಗಲಿ ಇಲ್ಲ ಎಂದು ಹೇಳಿದರು.