ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಗೃಹ ಸಚಿವ ಪರಮೇಶ್ವರ್ ಕೂಡ ಒಂದು ಹುದ್ದೆಯ ಪರ ಧ್ವನಿ ಎತ್ತಿದ್ದಾರೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಾಂಗ್ರೆಸ್ನ ಒಳಜಗಳ ಶಮನ ಮಾಡಲು ರಾಜ್ಯದ ನಾಯಕರಿಗೆ ವಾರ್ನ್ ಮಾಡಿದ್ದರು. ಆದರೆ ಸುರ್ಜೇವಾಲಾ ಅವರ ವಾರ್ನ್ಗೆ ಯಾವುದೇ ಸಚಿವರು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಕಾಂಗ್ರೆಸ್ನಲ್ಲಿ ಅಧಿಕಾರ ದಾಹ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ.
ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಳಿ ಎರಡು ದೊಡ್ಡ ಖಾತೆಯಿದೆ. ರಾಜ್ಯದಲ್ಲಿ ಪಕ್ಷ ಕಟ್ಟುವ ಹೊಣೆಯೂ ಅವರ ಮೇಲಿದೆ. ಹಾಗಾಗಿ ಒಂದು ಹುದ್ದೆ ಬಿಟ್ಟರೆ ಒಳ್ಳೆಯದು ಎಂದು ಹೇಳುವ ಮೂಲಕ ಒಂದು ಹುದ್ದೆಯ ಪರ ಬ್ಯಾಟ್ ಬೀಸಿದ್ದಾರೆ.
ಅಂದು ನನಗೂ ಮಂತ್ರಿ ಅಥವಾ ಅಧ್ಯಕ್ಷ ಸ್ಥಾನದ ಪೈಕಿ ಒಂದು ಹುದ್ದೆಗೆ ಅವಕಾಶ ನೀಡಿದ್ದರು. ನಾನು ಅಧ್ಯಕ್ಷ ಸ್ಥಾನ ಆಯ್ಕೆ ಮಾಡಿದ್ದೆ. ಡಿಕೆ ಶಿವಕುಮಾರ್ ಈಗ ಡಿಸಿಎಂ ಹಾಗೂ ಅಧ್ಯಕ್ಷರಾಗಿದ್ದಾರೆ. ಪಕ್ಷ ಸಂಘಟಿಸುವ ದೊಡ್ಡ ಜವಬ್ದಾರಿಯೂ ಸಹ ಇದೆ. ಹೈಕಮಾಂಡ್ನವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದರು.
ಎರಡು ಹುದ್ದೆಯಲ್ಲಿರುವ ಕಾರಣ ಸಹಜವಾಗಿ ಅಧ್ಯಕ್ಷ ಸ್ಥಾನ ಬದಲಾಯಿಸಿ ಎಂದು ಬೇರೆಯವರು ಎಂದು ಹೇಳುತ್ತಾರೆ. ನನಗೂ ಈಗೆ ಹೇಳಿದ್ದರು. ನಾವು ಒಂದು ಸಮುದಾಯ ಸೇರಿ ಸಭೆ ಮಾಡುತ್ತೇವೆ ಎನ್ನುವುದನ್ನು ಹೈಕಮಾಂಡ್ ಗಮನಿಸಿದೆ. ಹಾಗೆಯೇ ಪಕ್ಷ ಸಂಘಟನೆ ಆಗುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೈಕಮಾಂಡ್ ನಾಯಕರು ಗಮನಿಸುತ್ತಾರೆ ಎಂದು ಹೇಳಿದರು.