ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಪ್ರಜ್ಚಲ್ ರೇವಣ್ಣ ಮೇ. 31 ರಂದು ಶರಣಾಗುವುದಾಗಿ ಅವರೇ ಹೇಳಿದ್ದಾರೆ ಹಾಗಾಗಿ ಎಸ್ಐಟಿ ಪ್ರಜ್ವಲ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಇಂದು(ಮೇ.೨೭) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಸ್ಐಟಿ ಪ್ರಜ್ವಲ್ಗೆ ಬ್ಲೂ ಕಾರ್ನರ್ ನೋಟಿಸ್ ನೀಡಿದೆ. ಜೊತೆಗೆ ಅರೆಸ್ಟ್ ವಾರೆಂಟ್ ಕೂಡ ಇದೆ. ಪ್ರಜ್ವಲ್ ಬಂಧನದ ನಂತರ ಎಸ್ಐಟಿ ಬಳಿ ಇರುವ ಮಾಹಿತಿ, ದಾಖಲೆಗಳ ಆಧಾರದ ಮೇಲೆ ವಿಚಾರಣೆ ನಡೆಯಲಿದೆ ಎಂದರು.
ಪ್ರಜ್ವಲ್ ಎಸ್ಐಟಿ ಎದುರು ಏನೆಲ್ಲ ಹೇಳಿಕೆ ಕೊಡುತ್ತಾರೊ ಕೊಡಲಿ. ತನಿಖಾ ತಂಡ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತದೆ. ಇಲ್ಲಿಯವರೆಗೂ ರಾಜ್ಯದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಪ್ರಜ್ವಲ್ ಮೊದಲು ರಾಜ್ಯಕ್ಕೆ ಬಂದು ತನಿಖೆಗೆ ಒಳಪಡಲಿ ಎಂದು ಅವರು ತಿಳಿಸಿದರು.