ಬೆಂಗಳೂರು: ಪಂಚಮಶಾಲಿ ಮೀಸಲಾತಿ ಪ್ರತಿಭಟನೆ ವೇಳೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಪಂಚಮಶಾಲಿ ಸಮುದಾಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದ ಕಾರಣ ಲಾಠಿ ಚಾರ್ಜ್ ಅನಿವಾರ್ಯ ಇತ್ತು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಪಂಚಮಶಾಲಿ ಪ್ರತಿಭಟನೆ ಮತ್ತು ಲಾಠಿ ಚಾರ್ಜ್ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಸಾಂವಿಧಾನಿಕ ಹಕ್ಕು. ಅದನ್ನು ಯಾರು ವಿರೋಧಿಸಿಲ್ಲ ಎಂದರು.
5 ಸಾವಿರ ಟ್ರ್ಯಾಕ್ಟರ್ ಮೂಲಕ ಪಂಚಮಶಾಲಿ ಸಮುದಾಯದವರು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಅದಕ್ಕೆ ಅನುಮತಿಯನ್ನು ನೀಡಲಾಗಿತ್ತು. ಜೊತೆಗೆ ಮೀಸಲಾತಿ ಸಂಬಂಧ ಸಿಎಂ ಸಿದ್ದರಾಮಯ್ಯ ಚರ್ಚೆಗೆ ಆಹ್ವಾನಿಸಿದರು ಸ್ವಾಮೀಜಿಗಳು ಬರಲಿಲ್ಲ. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಸ್ವಾಮೀಜಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಲಾಠಿ ಚಾರ್ಜ್ ಅನಿವಾರ್ಯವಾಗಿತ್ತು. ಇದರಲ್ಲಿ ಪೊಲೀಸರ ಯಾವುದೇ ದುರುದ್ದೇಶವಿರಲಿಲ್ಲ ಎಂದು ಹೇಳಿದರು.
ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದ್ದೆವು. ಆದರೆ ಪ್ರತಿಭಟನೆಕಾರರು ಮುಖ್ಯ ರಸ್ತೆಗೆ ಬಂದಿದ್ದಾರೆ. ಜೊತೆಗೆ ಪೊಲೀಸರ ಮೇಲು ಕಲ್ಲು ತೂರಾಟ ನಡೆಸಿದರು. ಆದ ಕಾರಣ ಲಾಠಿ ಚಾರ್ಜ್ ಮಾಡುವುದು ಅನಿವಾರ್ಯವಾಯಿತು ಎಂದರು.
ಸರ್ಕಾರವು ಈ ಹೋರಾಟ ಹತ್ತಿಕ್ಕಲು ಗೋಲಿಬಾರ್ ಯೋಜನೆ ಹಾಕಿಕೊಂಡಿತ್ತು ಎಂಬ ಸ್ವಾಮೀಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಆ ರೀತಿ ಏನೂ ಇಲ್ಲ, ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಲಾಠಿ ಪ್ರಹಾರ ನಡೆದಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದರು.