ಬೆಂಗಳೂರು : ಮಳೆ ಸುರಿದು ಜಲಾಶಯಗಳಲ್ಲಿ ನೀರು ಹರಿದು ಬರುಂತಾಗಲಿ. ದೇವರನ್ನು ಪ್ರಾರ್ಥಿಸುವ ಹೊರತಾಗಿ ತಮ್ಮಲ್ಲಿ ಬೇರೆ ದಾರಿ ಉಳಿದಿಲ್ಲ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ತಮಿಳುನಾಡಿಗೆ ನ.1 ರಿಂದ ನ.15 ರವರೆಗೆ ಪ್ರತಿದಿನ 2,600 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ಆದೇಶಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲ.ಕೆಆರ್ಎಸ್ ಅಣೆಕಟ್ಟೆಗೆ ಒಳಹರಿವು ಬಹುತೇಕ ಶೂನ್ಯವಾಗಿದೆ. ಆದರೆ, ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ 815 ಕ್ಯೂಸೆಕ್ ನೀರು ತಮಿಳುನಾಡಿಗೆ ನೈಸರ್ಗಿಕವಾಗಿ ಹರಿದು ಹೋಗುತ್ತಿದೆ. ಸದ್ಯ ನಮ್ಮಲ್ಲಿ ಕೇವಲ 51 ಟಿಎಂಸಿ ಅಡಿ ನೀರು ಇದ್ದು, ಕುಡಿಯುವ ನೀರನ್ನು ಉಳಿಸಿಕೊಂಡರೆ ಸಾಕಾಗಿದೆ ಎಂದರು.
ಇನ್ನು ಮುಂದುವರೆದು ಮಾತನಾಡಿದ ಅವರು, ನಮ್ಮ ಹತ್ತಿರ ತಮಿಳುನಾಡಿಗೆ ಹರಿಸಲು ನೀರಿಲ್ಲ. ನೀರು ಬಿಡುವ ಶಕ್ತಿಯೂ ನಮ್ಮಲ್ಲಿ ಇಲ್ಲ. ಕುಡಿಯುವ ನೀರನ್ನು ಉಳಿಸಿಕೊಂಡರೆ ಸಾಕಾಗಿದೆ. ಇದನ್ನು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ.





