ಬೆಂಗಳೂರು: ಸಾಮರ್ಥ್ಯಕ್ಕಿಂತ ಹೆಚ್ಚು ಸಾಲ ನೀಡಿ ಬಡವರನ್ನು ಸಾಲದ ಸುಳಿಗೆ ಸಿಲಿಕಿಸುತ್ತಿರುವ ಹುನ್ನಾರವನ್ನು ತಡೆಯಲು ಆನ್ಲೈನ್ ವ್ಯವಸ್ಥೆ ಜಾರಿ ಸೇರಿದಂತೆ ಹಲವು ವಿಚಾರಗಳನ್ನು ಕಾನೂನಿನ ಚೌಕಟ್ಟಿನೊಳಗೆ ತರುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಹಾಗೂ ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಪೋರ್ಟಲ್ ಮೂಲಕವೇ ನಿಭಾಯಿಸಬೇಕು. ಯಾರಿಗೆ ಎಷ್ಟು ಸಾಲ ನೀಡಿದೆ ಎಂಬುದನ್ನು ಪೋರ್ಟಲ್ನಲ್ಲಿ ಉಲ್ಲೇಖಿಸಬೇಕು. ಸಾಲಕ್ಕೆ ವಿಧಿಸುವ ಬಡ್ಡಿ ದರದ ಪ್ರಮಾಣ ಪಾರದರ್ಶಕ ಹಾಗೂ ರಿಸರ್ವ್ ಬ್ಯಾಂಕ್ ನೀತಿಗೆ ಅನುಗುನವಾಗಿರಬೇಕು ಎಂಬ ನಿಯಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ರಾಜ್ಯದಲ್ಲಿ ನೋಂದಣಿ ಆಗೀರಬೇಕು. ಈ ಕಂಪನಿಗಳ ವ್ಯವಹಾರಗಳ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳನ್ನು ಒಳಗೊಂಡ ಒಂಬುಡ್ಸುಮನ್ ನೇಮಕ ಮಾಡಬೇಕು. ಹಾಗೆಯೇ ಈ ಕಂಪನಿಗಳು ಸಾಲದ ಹೆಸರಿನಲ್ಲಿ ಬಡ ಜನರಿಂದ ಯಾವುದೇ ವಸ್ತು ಅಥವಾ ಆಸ್ತಿಗಳನ್ನು ಅಡಮಾನ ಇಟ್ಟುಕೊಳ್ಳಬಾರದು ಎಂದು ಷರತ್ತು ವಿಧಿಸಲು ತೀರ್ಮಾನಿಸಲಾಗಿದೆ.