ಚಿಕ್ಕಮಗಳೂರು: ದೇವಿರಮ್ಮನ ಬೆಟ್ಟದಲ್ಲಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಮೈಸೂರು ಅರಸರ ಮನೆತನದಿಂದ ದೇವಿಗೆ ಬಾಗಿನ ಅರ್ಪಣೆ ಮಾಡಲಾಯಿತು.
ಮೈಸೂರು ಸಂಸ್ಥಾನದ ಪರವಾಗಿ ಆಗಮಿಸಿದ ಅರಸು ಸಂಘದ ರಾಜ್ಯಾಧ್ಯಕ್ಷ ದಿನೇಶ್ ತಂಡಕ್ಕೆ ದೇವಾಲಯದ ಆಡಳಿತ ಮಂಡಳಿ ಸ್ವಾಗತ ನೀಡಿತು. ಬಳಿಕ ಹಣ್ಣು, ಕಾಯಿ, ವೀಳ್ಯದೆಲೆ, ಸೀರೆ, ಅರಿಶಿನ-ಕುಂಕುಮ ಅರ್ಪಣೆ ಮಾಡಲಾಯಿತು.
ಇನ್ನು ದೇವಿರಮ್ಮನ ಬೆಟ್ಟದ ತಪ್ಪಲಿನ ಕೆಳಭಾಗದಲ್ಲಿರುವ ದೇವಸ್ಥಾನಕ್ಕೆ ಗಾಳಿ ರೂಪದಲ್ಲಿ ದೇವಿರಮ್ಮ ಪ್ರವೇಶಿಸಿದ್ದಾಳೆ. ವರ್ಷಕ್ಕೊಮ್ಮೆ ಬೆಟ್ಟದ ಮೇಲೆ ಭಕ್ತರಿಗೆ ದರ್ಶನ ನೀಡುವ ದೇವೀರಮ್ಮ ಉಳಿದ 364 ದಿನ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಈ ಬಾರಿ ಎರಡು ದಿನ ಬೆಟ್ಟ ಹತ್ತಲು ಅವಕಾಶ ನೀಡಲಾಗಿತ್ತು. ಎರಡು ದಿನದಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಭಕ್ತರು ಬರೀಗಾಲಿನಲ್ಲಿ ಬೆಟ್ಟವನ್ನು ಏರಿ ದೇವಿರಮ್ಮ ತಾಯಿಯ ದರ್ಶನ ಪಡೆದು ಪುನೀತರಾದರು.




