ಬೆಂಗಳೂರು: ರಾಜ್ಯದ ವಿಜಯಪುರ, ಬೆಳಗಾವಿ, ಬೀದರ್ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳಿಗೆ ಹೊಸ ನಾಮಕರಣ ಮಾಡಬೇಕೆಂದು ಸಚಿವ ಎಂ.ಬಿ.ಪಾಟೀಲ್ ಅವರು ಶಿಫಾರಸ್ಸು ಮಾಡಿದ್ದು, ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಚನ್ನಬಸವ ಪಟ್ಟದೇವರು ಹಾಗೂ ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ ಎಂದು ಹೊಸ ಹೆಸರುಗಳನ್ನು ಇಡಬೇಕೆಂದು ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಇದನ್ನು ಓದಿ: ಮೋದಿ ಅವಧಿಯಲ್ಲೇ ರಾಜ್ಯಕ್ಕೆ ಹೆಚ್ಚು ರೈಲು : ಕೇಂದ್ರ ಸಚಿವ ಎಚ್ಡಿಕೆ
ಸರ್ಕಾರ ಈ ನಾಲ್ಕು ನಿಲ್ದಾಣಗಳಿಗೆ ಸಂತರ ಹೆಸರು ಇಡಲು ಶಿಫಾರಸು ಮಾಡಿದ್ದು, ಅದಕ್ಕೆ ಗೃಹ ಸಚಿವಾಲಯದ ಒಪ್ಪಿಗೆ ಬೇಕಾಗಿದೆ.
ಈ ನಾಲ್ಕು ರೈಲು ನಿಲ್ದಾಣಗಳು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯಲ್ಲಿವೆ. ಕರ್ನಾಟಕದ ಈ ಭಾಗಗಳಿಗೆ ಸೂಚಿಸಿರುವ ಸಂತರ ಕೊಡುಗೆ ಅಪಾರವಾಗಿದೆ. ಆದ್ದರಿಂದ ಈ ಶಿಫಾರಸನ್ನು ಅಂಗೀಕರಿಸಿ ಮರುನಾಮಕರಣದ ಸಂಗತಿಯನ್ನು ಆದಷ್ಟು ಬೇಗ ಪ್ರಕಟಿಸಿ ಎಂದು ಕೋರಿದ್ದಾರೆ.





