ಬೆಂಗಳೂರು: ಮುಡಾ ಪ್ರಕರಣದಲ್ಲಿ ಆರ್ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಇಂದು(ಅ.28) ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಶಾಂತಿನಗರದ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಚಾರಣೆಗೆ ಹಾಜರಾಗುವಂತೆ ಅಕ್ಟೋಬರ್ 22 ರಂದು ನನಗೆ ನೋಟಿಸ್ ನೀಡಲಾಗಿತ್ತು. ಆದರೆ, ಅಕ್ಟೋಬರ್ 23 ರಂದು ಸಂಜೆ 4 ಗಂಟೆಗೆ ನನಗೆ ನೋಟಿಸ್ ತಲುಪಿದ ಕಾರಣ ನಾನು ಕಾಲಾವಕಾಶ ಕೇಳಿದ್ದೆ. ಹೀಗಾಗಿ ಅಕ್ಟೋಬರ್ 24 ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ನಾನು ಇಂದು ವಿಚಾರಣೆಗೆ ಹಾಜರಾಗಿದ್ದೇನೆ ಎಂದು ಹೇಳಿದರು.
ಮುಡಾ ಪ್ರಕರಣ: ಎ4 ಆರೋಪಿ ಸಹ ವಿಚಾರಣೆಗೆ ಹಾಜರು
ಮುಡಾ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತ 4 ಜನರ ಮೇಲೆ ಎಫ್ಐಆರ್ ದಾಖಲಿಸಿದೆ. ಈ ಎಫ್ಐಆರ್ನಲ್ಲಿ ಎ4 ಆರೋಪಿಯಾಗಿರುವ ದೇವರಾಜರನ್ನು ಸಹ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದು, ಇಂದು ಗಂಗರಾಜು ನಂತರ ದೇವರಾಜು ಮುಡಾ ಪ್ರಕರಣದ ಬಗ್ಗೆ ವಿಚಾರಣೆ ಎದುರಿಸಲಿದ್ದಾರೆ.





