ಶ್ರೀರಂಗಪಟ್ಟಣ : ಮಂಡ್ಯ ಜಿಲ್ಲೆಯಲ್ಲಿ ೫ ಲಕ್ಷ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ೧.೭೦ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಳಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ತಿಳಿಸಿದರು.
ಪಟ್ಟಣದಲ್ಲಿ ದಸರಾ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಯೂರಿಯಾ ಬಳಸುವ ಜಿಲ್ಲೆಗಳಲ್ಲಿ ಮಂಡ್ಯ ಜಿಲ್ಲೆಯೂ ಒಂದಾಗಿದೆ. ಅತಿಯಾದ ಯೂರಿಯಾ ಬಳಕೆಯಿಂದ ಭೂಮಿಯ ಫಲವತ್ತತೆ ಹಾಗೂ ಬೆಳೆಯ ಗುಣಮಟ್ಟ ಕುಸಿಯುತ್ತದೆ ಎಂದು ಎಚ್ಚರಿಸಿದರು.
ರಾಷ್ಟ್ರೀಯ ನೈಸರ್ಗಿಕ ಕೃಷಿ ಪದ್ಧತಿಯನ್ನು ಸದರಿ ವರ್ಷ ಜಾರಿಗೊಳಿಸಲಾಗಿದೆ.ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಉಪಯೋಗಿಸಬೇಕೆಂದು ರೈತರಿಗೆ ಸಲಹೆ ನೀಡಿದರು.
ಇದನ್ನು ಓದಿ : ಸಿಎಂ ನಗರ ಪ್ರದಕ್ಷಿಣೆ : ರಸ್ತೆಯಲ್ಲಿ ತ್ಯಾಜ್ಯ ನೋಡಿ ಸಿಎಂ ಗರಂ
ಬೆಲ್ಲದನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಕಾರಸವಾಡಿ ಮಹಾದೇವ ಮಾತನಾಡಿ, ಜಿಲ್ಲೆಯ ಬಸರಾಳು ರೈತ ಉತ್ಪಾದಕ ಕಂಪೆನಿ ೬ ಕೋಟಿ ರೂಗಳಿಗೂ ಅಽಕ ವಹಿವಾಟು ನಡೆಸಿದೆ. ಪ್ರಗತಿಪರ ಕೃಷಿಕರಿಗೆ ಇದು ಒಂದು ಪ್ರೇರಣೆಯಾಗಿದೆ. ರಾಸಾಯನಿಕ ಮುಕ್ತ ಬೆಳೆಗಳಿಗೆ ದೇಶ ವಿದೇಶಗಳಲ್ಲಿ ಉತ್ತಮ ಬೆಲೆ ಇದೆ, ರೈತರು ಬೆಳೆದ ಬೆಳೆಯನ್ನು ಬ್ರ್ಯಾಂಡಿಂಗ್ ಮತ್ತು ಪ್ಯಾಕಿಂಗ್ ಮಾಡಲು ಕೃಷಿ ಇಲಾಖೆ ಸಹಾಯಧನ ನೀಡುತ್ತದೆ ಎಂದು ತಿಳಿಸಿದರು.
ನೇಸರ ಆಗ್ರಿ ಸಂಸ್ಥೆಯ ಸಂಸ್ಧಾಪಕಿ ರೇಷ್ಮಾ ರಾಣಿ ಅವರು ಮಾತನಾಡಿ, ಭಾರತದಲ್ಲಿ ೫ ಗ್ಲೋಬಲ್ ಗ್ಯಾಪ್ ಗುಡ್ ಅಗ್ರಿಕಲ್ಚರಲ್ ಪ್ರಾಕ್ಟಿಸ್ ಕಾರ್ಯ ನಿರ್ವಹಿಸುತ್ತಿವೆ, ರೈತರು ಇವರ ಬಳಿ ಹೋಗಿ ಬೆಳೆಯನ್ನು ಪ್ರಮಾಣಿಕರಿಸಿದರೆ ಅವರು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಹೇಳಿದರು.
ಪಶು ವೈದ್ಯಕೀಯ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ಎಚ್.ಎಸ್.ಮಧುಸೂದನ್, ಹೈನುಗಾರಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು. ತಹಸಿಲ್ದಾರ್ ಚೇತನ ಯಾದವ್, ಕೃಷಿ ತಜ್ಞರು, ಜಿಲ್ಲೆಯ ವಿವಿಧ ರೈತ ಉತ್ಪಾದಕ ಕಂಪೆನಿಗಳ ಮಾಲೀಕರು, ಇತರ ಗಣ್ಯರು ಉಪಸ್ಥಿತರಿದ್ದರು.





