Mysore
26
broken clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಅರಳುಮರಳು ಮಾತು, ಕ್ಷಮಿಸಿಬಿಡೋಣ : ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ತಿರುಗೇಟು

ಶಿವಮೊಗ್ಗ : ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ‘ಕಾಪಿ ಹೊಡೆಸಿ ಶೇ.94.1 ಫಲಿತಾಂಶ ತಂದಿದ್ದಾರೆ’ ಎಂಬ ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿಶ್ವನಾಥ್ ಅವರಿಗೆ ಅರಳುಮರಳು. ಅವರನ್ನು ಕ್ಷಮಿಸಿಬಿಡೋಣ. ಅವರ ಹೇಳಿಕೆ ಶಿಕ್ಷಕರು ಮತ್ತು ಈ ನಾಡಿನ ಮಕ್ಕಳಿಗೆ ಮಾಡಿದ ಅವಮಾನ” ಎಂದು ಕಿಡಿಕಾರಿದರು.

ವಿಶ್ವನಾಥ್ ಆರೋಪವೇನು?
ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ್ದ ಎಂಎಲ್‌ಸಿ ಎಚ್.ವಿಶ್ವನಾಥ್, “ಕಳೆದ ವರ್ಷ ಶೇ.80.1 ಇದ್ದ ಫಲಿತಾಂಶ ಈ ವರ್ಷ ಶೇ.94.1ಕ್ಕೆ ಜಿಗಿದಿದೆ. 20ಕ್ಕೆ 20 ಆಂತರಿಕ ಅಂಕಗಳನ್ನು ಕುರುಡಾಗಿ ನೀಡಲಾಗಿದೆ. ಪಾಸಾಗಲು ಬೇಕಾದದ್ದು ಇನ್ನು 13 ಅಂಕ. ಅದನ್ನೂ ಕಾಪಿ ಮಾಡಿಸಿದ್ದಾರೆ” ಎಂದು ಆರೋಪಿಸಿದ್ದರು.

“ಉತ್ತರ ಕರ್ನಾಟಕದಲ್ಲಿ ಶೇ.40ರಷ್ಟು ಶಿಕ್ಷಕರ ಕೊರತೆ ಇದೆ. ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಹೀಗಿದ್ದರೂ ಇಷ್ಟೊಂದು ಫಲಿತಾಂಶ ಬಂದಿದ್ದು ಹೇಗೆ? ಮೌಲ್ಯಮಾಪನ ಕೇಂದ್ರಗಳಿಗೆ ಸಚಿವರೇ ಭೇಟಿ ನೀಡಿದ್ದು ತಪ್ಪು” ಎಂದು ವಿಶ್ವನಾಥ್ ಪ್ರಶ್ನಿಸಿದ್ದರು.

ಸಚಿವರ ಸ್ಪಷ್ಟನೆ
ಇದಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, “ಅಕ್ರಮ ನಡೆಸಿ ಫಲಿತಾಂಶ ಹೆಚ್ಚಳವಾಗಿದೆ ಎನ್ನುವುದು ಶಿಕ್ಷಕರ ಪರಿಶ್ರಮಕ್ಕೆ ಮಾಡಿದ ಅಪಮಾನ. ವಿಶ್ವನಾಥ್ ಅವರೇ ಹಿಂದೊಮ್ಮೆ ಶಿಕ್ಷಣ ಸಚಿವರಾಗಿದ್ದವರು. ಅವರಿಗೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಗೊತ್ತಿರಬೇಕು” ಎಂದರು.

ಇದೇ ವೇಳೆ, ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದಂತೆ ಈ ಬಾರಿ ಗ್ರೇಡ್ ಬದಲು ಅಂಕ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. “ಮುಂದಿನ ವರ್ಷದಿಂದ ಗ್ರೇಡ್ ನೀಡುವ ಕುರಿತು ಸರ್ಕಾರ ನಿರ್ಧರಿಸಲಿದೆ. ನಾವು ಹಿಂದಿ ವಿರೋಧಿಗಳಲ್ಲ. ಕನ್ನಡವನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

 

Tags:
error: Content is protected !!