Mysore
23
overcast clouds
Light
Dark

ನವೀಕರಿಸಬಹುದಾದದ ಇಂಧನ ವಲಯದಿಂದ ಉದ್ಯೋಗ ಸೃಷ್ಟಿ: ಗೌರವ್‌ಗುಪ್ತಾ

ಬೆಂಗಳೂರು: ವಿದ್ಯುತ್ ಉತ್ಪಾದನಾ ವಲಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸುವುದರಿಂದ ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸುವ ಜತೆಗೆ ಉದ್ಯೋಗ ಸೃಷ್ಟಿ ಸಾಧ್ಯವಾಗಿಸುತ್ತದೆ ಎಂದು  ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ಗುಪ್ತಾ ಹೇಳಿದ್ದಾರೆ.

ಪ್ರತಿ ವರ್ಷ ಜೂನ್‌ 15ರಂದು ವಿಶ್ವ ಪವನ ದಿನ ಆಚರಿಸಲಾಗುತ್ತಿದ್ದು, ಅದಕ್ಕೆ ಪೂರ್ವಭಾವಿಯಾಗಿ ಬುಧವಾರ(ಜೂನ್.‌೫) ನಾಗರಬಾವಿಯ ಕ್ರೆಡಲ್‌ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ಸರ್ಕಾರ ವಿದ್ಯುತ್‌ ವಲಯದಲ್ಲಿ ಗಮನ ಸೆಳೆಯುವ ಕೆಲಸದತ್ತ ಮುಂದಾಗಿದೆ. ಇದರಿಂದ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯೂ ಆಗುತ್ತಿದೆ.  ಇಂಗಾಲದ ಹೊರಸೂಸುವಿಕೆಯ ಪ್ರಮಾಣ ಕಡಿಮೆ ಮಾಡುವುದರ ಜತೆಗೆ ಗಾಳಿಯ ಗುಣಮಟ್ಟ ಸುಧಾರಿಸುವ ಪರಿಸರ ಸ್ನೇಹಿ ಕ್ರಮಗಳ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಇಂಧನ ಸಚಿವರಾದ ಕೆ.ಜೆ. ಜಾರ್ಜ್‌ ಅವರ ಮಾರ್ಗದರ್ಶನದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಗಮನಾರ್ಹ ಸಾಧನೆ ಮಾಡುತ್ತಿದೆ. ಶುದ್ಧ ಇಂಧನ ಉತ್ಪಾದನೆ ಹಾಗೂ ನವೀನ ಇಂಧನ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ.  ಸಾಂಪ್ರದಾಯಿಕ ಇಂಧನ ಮೂಲಗಳಿಗಿಂತ ಪವನ ವಿದ್ಯುತ್‌ ಕಡಿಮೆ ಖರ್ಚಿನ ಪರ್ಯಾಯ ಇಂಧನ ಮೂಲವಾಗಿದೆ ಎಂದು ತಿಳಿಸಿದರು.

ಪವನ ವಿದ್ಯುತ್‌ ಸಾಮರ್ಥ್ಯದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದ್ದು, 2024ರ ಏಪ್ರಿಲ್‌ ವೇಳೆಗೆ 46 ಗಿಗಾ ವ್ಯಾಟ್ ಪವನ ವಿದ್ಯುತ್‌ ಉತ್ಪಾದನೆ ಆಗಿದೆ. ಕರ್ನಾಟಕವು 124 ಗಿ.ವ್ಯಾ. ಪವನ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 5.3 ಗಿ.ವ್ಯಾ. ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ, 15.4 ಗಿ.ವ್ಯಾ. ಪವನ ಯೋಜನೆಗಳು ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿವೆ. ಬೀದರ್, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ವಿಜಯಪುರ, ತುಮಕೂರಿನಲ್ಲಿ ಉತ್ಪಾದನೆಯಾಗುವ ನವೀಕರಿಸಬಹುದಾದ ಇಂಧನವನ್ನು ಕೇಂದ್ರ ಜಾಲಕ್ಕೆ ಪಡೆಯಲು ಸಿಟಿಯುನಿಂದ ಯೋಜನೆ ಸಿದ್ಧಗೊಂಡಿದೆ. ಪವನ ವಿದ್ಯುತ್‌ ಯೋಜನೆ ಅನುಷ್ಠಾನಕ್ಕೆ ಕರ್ನಾಟಕವು ಅನುಕೂಲಕರ ನೀತಿ ಹೊಂದಿರುವುದರಿಂದ ಇವೆಲ್ಲಾ ಸಾಧ್ಯವಾಗಿದೆ ಎಂದು ಗೌರವ್‌ ಗುಪ್ತಾ ಅವರು ವಿವರಿಸಿದರು.

ಪವನ ವಿದ್ಯುತ್‌ ಯೋಜನೆಗಳ ಅನುಮೋದನೆಗಳನ್ನು ಸರಳೀಕರಿಸುವ ಮೂಲಕ ಭೂ ಸ್ವಾಧೀನ ಪ್ರಕ್ರಿಯೆ ಸಗುಮಗೊಳಿಸಿದ್ದೇವೆ. ಇಂಥ ಸುಧಾರಣಾ ಕ್ರಮಗಳ ಮೂಲಕ ನವೀಕರಿಸಬಹುದಾದದ ಇಂಧನ ವಲಯದಲ್ಲಿ ಕರ್ನಾಟಕವನ್ನು ನಂಬರ್‌ ಒನ್‌ ರಾಜ್ಯವನ್ನಾಗಿಸುವ ಪ್ರಯತ್ನ ನಡೆದಿದೆ. ಇದಕ್ಕೆ ಉದ್ಯಮದ ನಾಯಕರ ಸಹಕಾರವೂ ಅಗತ್ಯವಿದೆ ಎಂದರು.

2030ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಶೇ. 50 ರಷ್ಟು ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಸಾಧಿಸುವ ಮತ್ತು 2070ರ ವೇಳೆಗೆ ತಟಸ್ಥ ಇಂಗಾಲದ ಗುರಿ ಸಾಧಿಸುವಲ್ಲಿ ಪವನ ಶಕ್ತಿಯು ಪ್ರಮುಖವಾಗಿದೆ. ಸುಸ್ಥಿರ ಭವಿಷ್ಯಕ್ಕಾಗಿ ಪವನ ಶಕ್ತಿಯ ಉತ್ಪಾದನೆಗೆ ಒತ್ತು ನೀಡಲು ಬದ್ಧವಾಗಿ ವಿಶ್ವ ಪವನ ದಿನವನ್ನು ಅರ್ಥಪೂರ್ಣವಾಗಿಸೋಣ ಎಂದು ಹೇಳಿದರು.

 

ಕಾರ್ಯಕ್ರಮದಲ್ಲಿ ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಕ್ರೆಡಲ್‌ನ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಎನ್‌. ಅಮರನಾಥ್‌, ವಿಜ್ಞಾನಿ ಎಂ.ಪಿ ರಮೇಶ್‌, ಐಡಬ್ಲ್ಯುಪಿಎನ ಉಪಾಧ್ಯಕ್ಷ ಯು.ಬಿ.ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಅಜಯ್‌ ದೇವರಾಜ್‌, ಉಪಸ್ಥಿತರಿದ್ದರು.