ಬೆಂಗಳೂರು: ಹಿಂದಿನ ಸರ್ಕಾರ ಸರಿಯಾದ ಪ್ರಮಾಣದಲ್ಲಿ ಹಣ ಇಡದೇ ಕಾಮಗಾರಿಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಕೆಲಸ ಮಾಡಿ ಸಿಲುಕಿಕೊಂಡಿರುವ ಗುತ್ತಿಗೆದಾರರು ಹೆಚ್ಚಿನ ಕಮಿಷನ್ ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳುವುದು ಸರಿಯಲ್ಲ, ಹಿಂದಿನ ಸರ್ಕಾರ ಮೂರ್ನಾಲ್ಕು ವರ್ಷಗಳಾದರೂ ಬಾಕಿ ತೀರಿಸಲಾಗದಷ್ಟು ಕಾಮಗಾರಿಗಳನ್ನು ಮಂಜೂರು ಮಾಡಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ 5 ವರ್ಷಗಳಿಗಾಗುವಷ್ಟು ಕಾಮಗಾರಿಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಮಂಜೂರಾತಿ ನೀಡಿವೆ.
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ 10 ಸಾವಿರ ಕೋಟಿ ರೂ.ಗಳ ಕಾಮಗಾರಿಗಳಿಗೆ ಮಂಜೂರಾತಿ ನೀಡಿದೆ. ನೀರಾವರಿ ಇಲಾಖೆಯಲ್ಲಿ ಒಂದು ಲಕ್ಷ ಕೋಟಿ ರೂ.ನಷ್ಟು ಮಂಜೂರಾತಿಯಾಗಿದೆ. ಇದನ್ನು ತೀರಿಸಲು ನಮ್ಮ ಸರ್ಕಾರ ಹಣ ನೀಡಬೇಕು. ಬಿಜೆಪಿ ಸರ್ಕಾರ ಹಣ ಇಟ್ಟು ಹೋಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದರು.





