ದಾವಣಗೆರೆ: ಧರ್ಮದ ಹಿಂದೆ ಹೋದರೆ ನಮ್ಮ ದೇಶ ಅಭಿವೃದ್ಧಿ ಕಾಣುವುದಿಲ್ಲ. ನಮ್ಮ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದು, ಧರ್ಮದ ಹೆಸರಿನಲ್ಲಿ ಹೋದರೆ ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳಂತೆ ಭಾರತವು ದಿವಾಳಿ ಆಗುತ್ತದೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ರುದ್ರನಕಟ್ಟೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಹಾಗೂ ಸಮಸ್ತ ಕುರುಬ ಸಮುದಾಯದಿಂದ ಬುಧವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶ ಹಿಂದೂ ರಾಷ್ಟ್ರವಾದರೆ ಅಭಿವೃದ್ಧಿಯಾಗುವುದಿಲ್ಲ, ಧರ್ಮದ ಹಿಂದೇ ಹೋದ ಪಾಕಿಸ್ತಾನ, ಅಫ್ಘಾನಿಸ್ತಾನದ ಆರ್ಥಿಕ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ರೀತಿ ನಮ್ಮ ದೇಶಕ್ಕೂ ಅಪಾಯ ಗ್ಯಾರಂಟಿಯಾಗಿದ್ದು ಎಚ್ಚರದಿಂದಿರಿ ಹಿಂದೂ ಸ್ಥಾಪನೆಗೆ ಅವಕಾಶ ಕೊಡಬೇಡಿ. ಒಂದು ವೇಳೆ ಅವಕಾಶ ಕೊಟ್ಟರೆ ಭಾರತವು ದಿವಾಳಿಯಾಗುತ್ತದೆ ಎಂದಿದ್ದಾರೆ.
ಇಂದು ಜಾತ್ಯಾತೀತ ತತ್ವಕ್ಕೆ ಅಪಾಯ ಎದುರಾಗಿದೆ, ಭಾರತವನ್ನು ಆರ್ಎಸ್ಎಸ್ ಮತ್ತು ಬಿಜೆಪಿ ಹಿಂದು ರಾಷ್ಟ್ರ ಮಾಡಲು ಹೊರಟಿದೆ. ಇದಕ್ಕೆ ಅವಕಾಶ ಕೊಡಲೇ ಬೇಡಿ. ನಮ್ಮ ದೇಶದಲ್ಲಿ ಜಾತ್ಯಾತೀತ ತತ್ವ ಪಾಲಿಸಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಐದು ವರ್ಷ ಸಿಎಂ ಆಗಿ ಮುಂದುವರೆಯಬೇಕು. ಲೋಕಸಭೆ ಚುನಾವಣೆ ಹತ್ತಿರವಿದ್ದು ಎಲ್ಲರೂ ಕಾಂಗ್ರೆಸಸ ಬೆಂಬಲಿಸಿ ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.





