ಬೆಂಗಳೂರು: ಅಧ್ಯಕ್ಷ ಸ್ಥಾನದಿಂದ ನಾನು ಓಡಿ ಹೋಗುವುದಿಲ್ಲ. ಆದರೆ ಇಲ್ಲಿ ನಾವು ಶಾಶ್ವತವಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪಕ್ಷದ ಕಚೇರಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವುದಿಲ್ಲ. ನಮ್ಮ ಕಾಲದಲ್ಲಿ ಏನಾದರೂ ಗುರುತು ಬಿಟ್ಟು ಹೋಗಬೇಕು ಎಂದರು.
ಎಲ್ಲಿ ತನಕ ಕೆಪಿಸಿಸಿ ಅಧ್ಯಕ್ಷರಾಗಿ ಇರಿ ಅಂತಾರೆ, ಅಲ್ಲಿಯವರೆಗೂ ನಾನು ಕೆಲಸ ಮಾಡುತ್ತೇನೆ. ಅಧ್ಯಕ್ಷರಾದವರು ಹೇಗೆ ಕೆಲಸ ಮಾಡಬೇಕು, ಆ ಮಾದರಿಯನ್ನು ನಾನು ರೂಪಿಸುತ್ತಿದ್ದೇನೆ . ಪಕ್ಷಕ್ಕೆ ಕಟ್ಟಡ ಕಟ್ಟಬೇಕಾಗುತ್ತದೆ. ಸದಸ್ಯತ್ವ ನೋಂದಣಿ ಮಾಡಿಸಬೇಕಾಗುತ್ತದೆ. ಆ ಕೆಲಸಗಳ ಬಗ್ಗೆ ನಾನು ಹೇಳಿದ್ದೇನೆ. ಅದರ ಹೊರತು ಬೇರೆ ಏನು ಇಲ್ಲ, ನಾನು ಓಡಿ ಹೋಗುವ ಮನುಷ್ಯ ಅಲ್ಲ ಎಂದರು.
ಎಲ್ಲಿಯವರೆಗೂ ಅವಕಾಶ ಕೊಡುತ್ತಾರೆ, ಅಲ್ಲಿಯವರೆಗೆ ಕೆಲಸ ಮಾಡುತ್ತೇನೆ. ಗಾಂಧಿ ಕುಟುಂಬ ಹೇಳಿದಂತೆ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಕಚೇರಿಗಳ ನಿರ್ಮಾಣ ಶಂಕುಸ್ಥಾಪನೆ ಸಂಬಂಧಪಟ್ಟಂತೆ ಕಾರ್ಯಕ್ರಮಕ್ಕಾಗಿ ದಿನಾಂಕ ನೀಡುವಂತೆ ಕೇಳಿದ್ದೇನೆ. ಹೈಕಮಾಂಡ್ ನಾಯಕರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.





