ನವದೆಹಲಿ: ಇದು ಪ್ರಧಾನಿ ನರೇಂದ್ರ ಮೋದಿ ಅವರ ಕಾಲ. ಶಂಕುಸ್ಥಾಪನೆಯನ್ನು ಒಬ್ಬರು ಮತ್ತು ಉದ್ಘಾಟನೆಯನ್ನು ಇನ್ನೊಬ್ಬರು ಮಾಡುವ ಸಮಯ ಮುಗಿದು ಹೋಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಪರೋಕ್ಷವಾಗಿ ಡಿಸಿಎಂ ಶಿವಕುಮಾರ್ ಅವರಿಗೆ ತಿರುಗೇಟು ನೀಡಿರುವ ಅವರು, ನಾನು ಹೊಸ ತಲೆಮಾರಿನವ, ಹಾಗಾಗಿ ಬೇಗ ಕೆಲಸ ಆಗಬೇಕು ಎನ್ನುವವನು. ಇಂದಿರಾ ಗಾಂಧಿ ಶಂಕುಸ್ಥಾಪನೆ ಮಾಡಿ, ಸೋನಿಯಾ ಗಾಂಧಿ ಉದ್ಘಾಟನೆ ಮಾಡುವ ಸಮಯ ಮುಗಿದಿದೆ. ಇದು ಮೋದಿ ಕಾಲ, ಎಲ್ಲವೂ ವೇಗವಾಗಿ ನಡೆಯುತ್ತವೆ. ಆದರೆ ವಿಳಂಬ ಮಾಡುವುದೇ ಕಾಂಗ್ರೆಸ್ ಪಕ್ಷದವರ ಕಥೆ ಎಂದು ಟಾಂಗ್ ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳದಿ ಲೈನ್ ಮೆಟ್ರೊವನ್ನು ಏಕೆ ಆತುರದಲ್ಲಿ ಮಾಡಿದರು ಅಂಥ ಬೈಯುತ್ತಿರುವವರು, ಇವರ ಕೊಡುಗೆ ಏನು? ಸಮಸ್ಯೆಗಳು ಇದ್ದಾಗ ಎಲ್ಲಿ ಹೋಗಿದ್ದರು ಇವರು. ಮೆಟ್ರೋಗೆ ನಾಲ್ಕು ವರ್ಷ ಎಂ.ಡಿ ಇರಲಿಲ್ಲ. ಬಿಎಂಆರ್ಸಿಎಲ್ ಎರಡು ವರ್ಷದಲ್ಲಿ ಅರ್ಧ ಡಜೆನ್ ಸಮಯ ಮುಹೂರ್ತ ಫಿಕ್ಸ್ ಮಾಡಿ, ಮುಂದೂಡಿಕೆ ಮಾಡಿದೆ ಎಂದರು.
ವೇಗವಾಗಿ ಕೆಲಸ ಮಾಡುವ ಸಮಯ ಇದು. ಆಲಮಟ್ಟಿಗೆ ಶಾಸ್ತ್ರೀಯವರು ಅಡಿಗಲ್ಲು ಹಾಕಿ, ಮನಮೋಹನ್ ಸಿಂಗ್ ಉದ್ಘಾಟನೆ ಮಾಡಿದರು. ಕಾಂಗ್ರೆಸ್ನವರು ಈ ವೇಗದಲ್ಲಿ ದೇಶ ನಡೆಸಿದ್ದಾರೆ. ಜಿರೋ ಟ್ರಾಫಿಕ್ನಲ್ಲಿ ಓಡಾಡುವವರಿಗೆ ಮೆಟ್ರೋ ಅವಶ್ಯಕತೆ ಬಗ್ಗೆ ಏನು ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.





