ಬೆಳಗಾವಿ : ಕಾರು ಮತ್ತು ಬೈಕ್ ನಡುವಿನ ಅಪಘಾತ ಸಂಬಂಧಿಸಿದಂತೆ ಭವಾನಿ ರೇವಣ್ಣ ಅವರ ವರ್ತನೆ ಬಗ್ಗೆ ಮಾಜಿ ಸಚಿವ ಎಚ್ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಜನರ ಬಳಿ ಎಚ್ಡಿ ರೇವಣ್ಣ ಅವರು ಕ್ಷಮೆ ಕೋರಿದ್ದಾರೆ.
ಸುವರ್ಣಸೌಧದಲ್ಲಿ ಸೋಮವಾರ ಮಾತನಾಡಿ, ಪತ್ನಿ ವರ್ತನೆಯ ಬಗ್ಗೆ ಯಾರಿಗಾದರೂ ನೋವಾದರೆ ಕ್ಷಮೆ ಕೋರುತ್ತೇನೆ ಎಂದು ಎಚ್ಡಿ ರೇವಣ್ಣ ಹೇಳಿದ್ದಾರೆ.
” ಬೈಕ್ ಸವಾರ ಕುಡಿದು ಬೈಕ್ ಓಡಿಸಿದ್ದ. ನಾವೇನು ಅವರ ಬಳಿ ಡ್ಯಾಮೇಜ್ ಹಣ ಕೊಡಿ ಎಂದು ಕೇಳಲಿಲ್ಲ. ಏನಾದರೂ ಹೆಚ್ಚು ಕಮ್ಮಿ ಆಗಿದ್ರೆ ಯಾರು ಹೊಣೆ? ಈ ಸಂಬಂಧ ಬೇಕಾದರೆ ಭವಾನಿ ರೇವಣ್ಣ ಅವರಿಂದಲೂ ಕ್ಷಮೆ ಕೇಳಿಸುತ್ತೇನೆ. ಸಿಟ್ಟಾಗಿ ಭವಾನಿ ಮಾತನಾಡಿದ್ದಾರೆ ” ಎಂದರು.
ಬೈಕ್ ಅವನೇ ಬಂದು ಸೈಡ್ ನಿಂದ ಕಾರಿಗೆ ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಗಾಗುತ್ತಿತ್ತು? ಅವರು ಏನೂ ಅಹಂಕಾರ ಮಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಅವರು ಸಿಟ್ಟನಲ್ಲಿ ಮಾತನಾಡಿದ್ದಾರೆ. ನಮ್ಮ ಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು? ಅದನ್ನು ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ನವನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು? ಎಂದು ಪ್ರಶ್ನಿಸಿದರು.
ದೊಡ್ಡ ವಿಚಾರ ಮಾಡಬೇಡಿ: ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ? ಯಾರಿಗಾದರೂ ನೋವಾಗಿದ್ದರು ವಿಷಾದ ವ್ಯಕ್ತಪಡಿಸುತ್ತೇನೆ. ಅವರು ಕುಡಿದು ಬಂದು ಮುಂದೆನೇ ಗುದ್ದಿದ್ದಾರೆ. ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ? ಎಷ್ಟೇ ನಿಧಾನವಾಗಿ ಹೋಗಿದ್ದರು ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಚಾರ ಮಾಡಬೇಡಿ ಎಂದು ಮನವಿ ಮಾಡಿದರು.