ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ದುರಸ್ತಿ ಕಾಮಗಾರಿ ನಡೆಯುತ್ತಿರುವಾಗ ಗುಡ್ಡ ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ರಾಘವೇಂದ್ರ, ರಾಜು, ಶಬ್ಬೀರ್ ಎಂದು ಗುರುತಿಸಲಾಗಿದೆ. ಘಟನೆ ಗುರುವಾರ ಸಂಜೆ ಸಂಭವಿಸಿದ್ದು, ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಮೃತದೇಹಗಳನ್ನು ರಕ್ಷಣಾ ತಂಡಗಳು ಪತ್ತೆ ಮಾಡಿವೆ. ಮೃತರಲ್ಲಿ ಒಬ್ಬರು ಕಾಮಗಾರಿ ಮೇಲ್ವಿಚಾರಕರೂ ಸೇರಿದ್ದಾರೆ.
ಘಟನೆಯಲ್ಲಿ ಇನ್ನೂ ನಾಲ್ಕು ಜನರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಸ್ಡಿಆರ್ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಪತ್ತೆ ಮಾಡಿ, ಶಿವಮೊಗ್ಗದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಹುಲಿಕಲ್ ಘಾಟ್ ಪ್ರದೇಶವು ಗುಡ್ಡಗಾಡುಗಳ ನಡುವಿನ ಕುಂದಾಪುರ-ಶಿವಮೊಗ್ಗ ಹೆದ್ದಾರಿಯಲ್ಲಿದ್ದು, ಭೂಕುಸಿತಕ್ಕೆ ತುತ್ತಾಗುವ ಸಂಭಾವ್ಯ ಪ್ರದೇಶವಾಗಿದೆ. ಕಾಮಗಾರಿ ವೇಳೆ ದಿಢೀರ್ ಗುಡ್ಡ ಕುಸಿತ ಸಂಭವಿಸಿದ್ದು, ಏಳು ಜನರು ಮಣ್ಣಿನಡಿ ಸಿಲುಕಿದ್ದರಲ್ಲಿ ನಾಲ್ಕು ಜನರನ್ನು ರಕ್ಷಿಸಲಾಗಿದೆ.





