ಬೆಂಗಳೂರು: ಶಾಲೆಗಳಲ್ಲಿ ಪ್ರತಿದಿನ ವಂದೇ ಮಾತರಂ’ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್ ಇಂದು ಅದನ್ನು ವಜಾಗೊಳಿಸಿದೆ.
ಬೆಂಗಳೂರಿನ ವಕೀಲ ಸೋಮಶೇಖರ್ ರಾಜವಂಶಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು ಕೇಂದ್ರ ಗೃಹ ಇಲಾಖೆಯ ಆದೇಶದಲ್ಲಿ ವಂದೇ ಮಾತರಂ ಗೀತೆ ಹಾಡಬಹುದು ಎಂಬ ಪದ ಬಳಕೆ ಮಾಡಲಾಗಿದ್ದು, ಅದು ಕಡ್ಡಾಯವಲ್ಲ ಎಂಬುದನ್ನು ಸೂಚಿಸುತ್ತದೆ. ಅಲ್ಲದೇ, ಈಚೆಗೆ ಸುಪ್ರೀಂ ಕೋರ್ಟ್ ಇಂಥದ್ದೇ ಮನವಿ ಒಳಗೊಂಡಿದ್ದ ಪಿಐಎಲ್ ವಜಾಗೊಳಿಸಿದೆ ಎಂದರು.
ಇದನ್ನು ಆಲಿಸಿದ ಪೀಠವು ವಂದೇ ಮಾತರಂ ಗೀತೆಯನ್ನು ಯಾವುದೇ ಶಾಸನಬದ್ಧ ಚೌಕಟ್ಟಿನಲ್ಲಿ ಸೇರ್ಪಡೆ ಮಾಡಲಾಗಿಲ್ಲ. ಕೇಂದ್ರ ಸರ್ಕಾರದ ಆದೇಶದಲ್ಲಿ ಸಾಧ್ಯತೆ ಎಂಬ ಪದ ಬಳಕೆ ಮಾಡಿದ್ದು, ಅದು ಕಡ್ಡಾಯವಲ್ಲ. ರಾಷ್ಟ್ರಗೀತೆಯಂತೆ ವಂದೇ ಮಾತರಂ ಗೀತೆಯ ಗಾಯನ ಕಡ್ಡಾಯವಲ್ಲ. ಇಂಥದ್ದೇ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ” ಎಂದು ಅರ್ಜಿ ವಜಾಗೊಳಿಸಿತು.
ವಂದೇ ಮಾತರಂ ಗೀತೆಯನ್ನು ಶಾಲೆಗಳ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಹಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಯ ಅಧಿಕೃತ ಜಾಲಾತಾಣದಲ್ಲಿ ಭಾರತದ ರಾಷ್ಟ್ರಗೀತೆಗೆ ಸಂಬಂಧಿಸಿದ ಆದೇಶಗಳು ಎಂಬ ಆದೇಶ ಪ್ರಕಟಿಸಲಾಗಿದೆ. ಈ ಆದೇಶದಂತೆ ವಂದೇ ಮಾತರಂ ಗೀತೆಯಲ್ಲಿರುವ ಆರು ಚರಣಗಳುಳ್ಳ ಅಧಿಕೃತ ಆವೃತ್ತಿಯನ್ನು ಎಲ್ಲ ಶಾಲೆಗಳು ಪ್ರಾರಂಭಕ್ಕೂ ಮುನ್ನ ಪ್ರತಿ ದಿನ ಸಾಮೂಹಿಕವಾಗಿ ಹಾಡಬೇಕು ಎಂದು ಸೂಚಿಸಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.





