ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ವಿಟ್ಟರ್ ಮೂಲಕ ದೇವದೂತ ಬಂದ ನಂತರವೇ ಎಂದು ತಲೆ ಬರಹ ನೀಡಿ ಮೋದಿ ಪ್ರಧಾನಿ ಆದಾಗಿನಿಂದ ಇಲ್ಲಿಯವರೆಗೆ ಇವೆಲ್ಲಾ ಅನಾಹುತಗಳು ನಡೆದಿವೆ ಎಂದು ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ, ಪ್ರಧಾನಿ ಮೋದಿ ತಮ್ಮನ್ನು ತಾವು ದೇವದೂತ ಎಂದು ಕರೆದುಕೊಂಡಿದ್ದರು. ಇದನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿರುವ ಎಚ್ಸಿ ಮಹದೇವಪ್ಪ, ನಿಮ್ಮ ಅವಧಿಯಲ್ಲೇ ಡಾಲರ್ ಎದುರು ರೂಪಾಯಿ ಕುಸಿತ ಕಂಡಿತು. ಸಿಲಿಂಡರ್ ಬೆಲೆ ಏರಿಕೆ ಕಂಡಿತು. ಪುಲ್ವಾಮಾ ದಾಳಿ, ಹಸಿವಿನ ಸೂಚ್ಯಂಕದಲ್ಲಿ ಭಾರತದ ಕಳಪೆ ಸಾಧನೆ, ಮಣಿಪುರ ಹಿಂಸಾಚಾರ ವಿವಿಧ ವಿಚಾರಗಳನ್ನು ಉಲ್ಲೇಖಿಸಿ, ಮೋದಿ ಕಾಲೆಳೆದಿದ್ದಾರೆ.
ಟ್ವಿಟ್ಟರ್ನಲ್ಲೇನಿದೆ?
ದೇವದೂತ ಬಂದ ನಂತರವೇ
1) 72 ರೂಪಾಯಿ ಇದ್ದ ಪೆಟ್ರೋಲ್ ಬೆಲೆ 100 ರೂಪಾಯಿಗೆ ಏರಿತು
2) 60 ರೂ ಇದ್ದ ಡೀಸೆಲ್ 85 ಕ್ಕೆ ಏರಿಕೆಯಾಯಿತು
3) ಡಾಲರ್ ಎದುರು ರೂಪಾಯಿಯು ಭಾರೀ ಕುಸಿತ ಕಂಡಿತು
4) ಅಡುಗೆ ಸಿಲಿಂಡರ್ ಬೆಲೆ 400 ರಿಂದ 1000 ರೂಪಾಯಿಗೆ ಏರಿಕೆ ಕಂಡಿತು
5) ಪುಲ್ವಾಮ ದಾಳಿ ನಡೆದು ಸೈನಿಕರು ಸಾವನ್ನಪ್ಪುವಂತಾಯಿತು
6) ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 55 ರಿಂದ 102 ನೇ ಸ್ಥಾನಕ್ಕೆ ಕುಸಿಯಿತು
7) ಜನ ಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು
8) ಕರೋನಾ ಸಂದರ್ಭದಲ್ಲಿ ಆಕ್ಸಿಜನ್ ದೊರಕದೇ ಲೆಕ್ಕವಿಲ್ಲದಷ್ಟು ಸಾವು ನೋವುಗಳಾಯಿತು
9) ಚೀನಾವು ಗಡಿ ಪ್ರದೇಶದಲ್ಲಿ ಭಾರತವನ್ನು ಆಕ್ರಮಿಸಿ ತನ್ನ ಗ್ರಾಮಗಳನ್ನು ನಿರ್ಮಿಸಿತು
10) ಬಾಬಾ ಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಒದಗಿತು
11) ಜನರಿಗೆ ನ್ಯಾಯವಾಗಿಯೇ ನೀಡಬೇಕಿದ್ದ ಬರ ಪರಿಹಾರವನ್ನು ಕೋರ್ಟ್ ಮೆಟ್ಟಿಲೇರಿ ಪಡೆಯುವಂತೆ ಆಯಿತು
12) ಮಣಿಪುರದಂತಹ ರಾಜಕೀಯ ಅರಾಜಕತೆ ಮತ್ತು ಹಿಂಸೆಯು ಕಣ್ಣ ಮುಂದೆಯೇ ಜರುಗಿತು
13) ದೇಶದ ಸಾಲವು 55 ಲಕ್ಷ ಕೋಟಿಗಳಿಂದ 185 ಲಕ್ಷ ಕೋಟಿಗೆ ಏರಿಕೆ ಆಯಿತು ಎಂದು ಸುದೀರ್ಘವಾಗಿ ಬರೆದುಕೊಂಡು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.