Mysore
17
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ಎಸ್ಸೆಸ್ಸೆಲ್ಸಿ, ಪಿಯುಸಿ 3 ಪೂರಕ ಪರೀಕ್ಷೆ ಕೈಬಿಟ್ಟ ಸರ್ಕಾರ : 2 ವಾರ್ಷಿಕ ಪರೀಕ್ಷೆಗೆ ಸೀಮಿತ

ಬೆಂಗಳೂರು : ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ಹಿಂದೆ ಜಾರಿ ಮಾಡಲಾಗಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಮೂರು ಪೂರಕ ಪರೀಕ್ಷೆ ಪರಿಕಲ್ಪನೆಯನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ.

ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂಬ ಶಿಕ್ಷಣ ತಜ್ಞರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಮೂರು ಪರೀಕ್ಷೆಗಳ ಪರಿಕಲ್ಪನೆಯನ್ನು ಕೈಬಿಟ್ಟು ಎರಡು ವಾರ್ಷಿಕ ಪರೀಕ್ಷೆ ನಡೆಸಲು ಮುಂದಾಗಿದೆ.

ಹೀಗಾಗಿ ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ವರ್ಷದಿಂದ ವಾರ್ಷಿಕ ಎರಡು ಪರೀಕ್ಷೆಗಳನ್ನು ಬರೆದು ಉತ್ತೀರ್ಣವಾಗಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಉತ್ತೀರ್ಣ ಅಂಕ ಇಳಿಕೆ ಮಾಡಿರುವ ಕಾರಣಕ್ಕೆ ಒಂದು ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಪರೀಕ್ಷೆಗಳ ಉತ್ತೀರ್ಣ ಅಂಕಗಳನ್ನು ಶೇಕಡಾ ೩೫ರಿಂದ ಶೇಕಡಾ ೩೩ಕ್ಕೆ ಇಳಿಕೆ ಮಾಡಲಾಗಿದೆ. ಹೀಗಾಗಿ ಮೂರು ಪರೀಕ್ಷೆಗಳ ಅಗತ್ಯವಿಲ್ಲ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಈಗಾಗಲೇ ೨೦೨೫-೨೦೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-೧ ಮತ್ತು ೨ರ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ದೃಷ್ಟಿಯಿಂದ ೨೦೨೩-೨೪ರಲ್ಲಿ ಜಾರಿಗೆ ತಂದ ವರ್ಷಕ್ಕೆ ಮೂರು ಪರೀಕ್ಷೆ ಗಳನ್ನು ನಡೆಸುವ ಪ್ರಯೋಗ ಸತತ ೨ನೇ ವರ್ಷವೂ ಫಲಿತಾಂಶ ಕುಸಿತದೊಂದಿಗೆ ವಿಫಲವಾಗಿತ್ತು. ಇದರಿಂದ ಈ ಮೂರು ಪರೀಕ್ಷೆ ಗಳ ಅಗತ್ಯ ಬಗ್ಗೆಯೇ ಪ್ರಶ್ನೆ ಹುಟ್ಟುವಂತೆ ಮಾಡಿತ್ತು. ೨೦೨೨-೨೩ನೇ ಸಾಲಿನ ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆಯ ಕ್ರೋಢೀಕೃತ ಫಲಿತಾಂಶಕ್ಕೆ(ಶೇ.೮೭) ಹೋಲಿಸಿದರೆ ೨೦೨೩-೨೪ನೇ ಸಾಲಿನ ಎಸ್ಸೆಸ್ಸೆಲ್ಸಿಯ ಮೂರೂ ಪರೀಕ್ಷೆಗಳ ಒಟ್ಟಾರೆ ಫಲಿತಾಂಶ, ಶೇ.೮೧.೬ರಷ್ಟು ದಾಖಲಾಗಿ ಸುಮಾರು ಶೇ.೬ರಷ್ಟು ಕಡಿಮೆಯಾಗಿತ್ತು. ೨೦೨೪-೨೫ನೇ ಸಾಲಿನಲ್ಲಿ ಪರೀಕ್ಷೆ ಬರೆದಿದ್ದ ೮,೬೮,೩೮೫ ವಿದ್ಯಾರ್ಥಿಗಳಲ್ಲಿ ೬,೪೫,೨೭೩ ಮಂದಿ ಉತ್ತೀರ್ಣರಾಗಿದ್ದು ಶೇ.೭೪.೩೧ ಫಲಿತಾಂಶ ದಾಖಲಾಗಿದೆ. ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಶೇ.೭.೩ರಷ್ಟು ಇಳಿಕೆಯಾಗಿದೆ.

ಇನ್ನು, ದ್ವಿತೀಯ ಪಿಯುಸಿಯಲ್ಲಿ ಕಳೆದ ಬಾರಿ ಶೇ.೪ರಷ್ಟು ಏರಿಕೆಯಾಗಿದ್ದ ಕ್ರೋಢೀಕೃತ ಫಲಿತಾಂಶ ಈ ಬಾರಿ ೪.೭೮ರಷ್ಟು ಕಡಿಮೆಯಾಗಿದೆ. ಮೂರೂ ಪರೀಕ್ಷೆಗಳಿಗೆ ಒಟ್ಟು ೬,೩೯,೮೦೦ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ೫,೪೫,೦೩೨ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೮೫.೧೯ರಷ್ಟು ಫಲಿತಾಂಶ ಬಂದಿದೆ. ಇದರಿಂದ ಮೂರು ಪರೀಕ್ಷೆಗಳ ಪ್ರಯೋಗ ಯಶಸ್ವಿಯಾಗಿಲ್ಲ. ಇದನ್ನು ಮುಂದುವರಿಸಬೇಕಾ ಬೇಡವಾ ಎನ್ನುವ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ ಎನ್ನುವ ಅಭಿಪ್ರಾಯ ಶಿಕ್ಷಣ ಕ್ಷೇತ್ರದಲ್ಲಿ ಕೇಳಿಬಂದಿತ್ತು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿಯ ಮೊದಲನೇ ಮತ್ತು ಎರಡನೇ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಂತಿಮ ವೇಳಾಪಟ್ಟಿಯ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆಗಳು ೨೦೨೬ರ ಫೆಬ್ರವರಿ ೨೮ ರಂದು ಪ್ರಾರಂಭವಾಗಲಿದ್ದು, ಮಾರ್ಚ್ ೧೭ ರಂದು ಮುಕ್ತಾಯಗೊಳ್ಳಲಿವೆ. ದ್ವಿತೀಯ ಪಿಯುಸಿ ಪರೀಕ್ಷೆಯ ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ೨೦೨೬ರ ಮಾರ್ಚ್ ೧೮ರಂದು ಆರಂಭವಾಗಿ ಏಪ್ರಿಲ್ ೨ರವರೆಗೆ ನಡೆಯುಲಿವೆ.

Tags:
error: Content is protected !!