ಬೆಂಗಳೂರು: ಮೆಕ್ಕೆಜೋಳ ಬೆಳೆಗಾರರ ಅಹವಾಲುಗಳು, ದಿಢೀರ್ ಬೆಲೆ ಇಳಿಕೆ ಹಾಗೂ ಖರೀದಿ ಕೇಂದ್ರ ತೆರೆಯುವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು.
ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳವನ್ನು ತಕ್ಷಣ ಖರೀದಿಸುವಂತೆ ರಾಜ್ಯದ ಪ್ರಮುಖ ಡಿಸ್ಟಿಲರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು. ಕುಕ್ಕುಟೋದ್ಯಮಕ್ಕೆ ಮೆಕ್ಕೆಜೋಳದ ಬೇಡಿಕೆಯಿದ್ದು, ಅವರೊಂದಿಗೆ ಸಹ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಇದನ್ನು ಓದಿ: ಮುಸುಕಿನ ಜೋಳದ ಬೆಳೆಗೆ ಬಿಳಿ ಸುಳಿ ರೋಗ ಬಾಧೆ
ಮೆಕ್ಕೆಜೋಳ ಖರೀದಿ ಸಂಬಂಧ ಸಭೆಯಲ್ಲಿ ಚರ್ಚೆಯಾದ ಆರಂಭಿಕ ವಿಚಾರಗಳು. ರಾಜ್ಯದಲ್ಲಿ ದಿಡೀರ್ ಮೆಕ್ಕೆಜೋಳ ಬೆಲೆ ಕಡಿಮೆ ಆಗಲು ಕಾರಣವಾದ ಸಂಗತಿಗಳು.
1) ಒಂದು ಕಡೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳವಾಗಿದೆ. ಇದು ಗೊತ್ತಿದ್ದೂ ಕೇಂದ್ರ ಸರ್ಕಾರ ವಿದೇಶಗಳಿಂದ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಆಮದು ಮಾಡಿಕೊಂಡಿದೆ. ಇದರಿಂದಾಗಿ ರಾಜ್ಯದ ಮತ್ತು ದೇಶದ ಮೆಕ್ಕೆಜೋಳ ಬೆಳೆದ ರೈತರಿಗೆ ವಿಪರೀತ ಹೊರೆ ಆಗಿದೆ.
2) ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಗದಿ ಮಾಡಿರುವ ಕೋಟಾ ಪ್ರಮಾಣವೂ ಅತ್ಯಂತ ಕಡಿಮೆ ಇದೆ. ಇದರಿಂದಾಗಿ ಡಿಸ್ಟಿಲರಿಗಳು ಮೆಕ್ಕೆ ಖರೀದಿಸುವ ಪ್ರಮಾಣವೂ ಕಡಿಮೆ ಆಗಿದೆ.
3) ನಿಯಮ ಪಾಲಿಸದ ಏಜೆನ್ಸಿಗಳಿಂದ ಸಮಸ್ಯೆ: ಕೇಂದ್ರದ ನೋಡಲ್ ಏಜೆನ್ಸಿಗಳಾದ ನಾಫೆಡ್/ಎನ್ಸಿಸಿಎಫ್ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆ ಜೋಳ ಸಂಗ್ರಹಣೆ ಮತ್ತು ಎಥೆನಾಲ್ ಉತ್ಪಾದನೆಗೆ ಬಳಕೆಗಾಗಿ ಈಗಾಗಲೇ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ ಸಂಬಂಧಪಟ್ಟ ನೋಡಲ್ ಏಜೆನ್ಸಿಗಳು ಮಾರ್ಗಸೂಚಿಯಂತೆ ಇನ್ನೂ ಖರೀದಿ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಇದು ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣ.
4) ಡಿಸ್ಟಿಲರಿಗಳು ಮೆಕ್ಕೆಜೋಳ ಬೆಲೆ ಕಡಿಮೆ ಇದ್ದಾಗಲೇ ಹಿಂದೆಯೇ ಖರೀದಿಸಿ ಶೇಖರಣೆ ಮಾಡಿಕೊಂಡಿವೆ. ಇದರಿಂದಾಗಿ ಈಗ ಖರೀದಿಗೆ ಮುಂದೆ ಬರುತ್ತಿಲ್ಲ. ಇದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದ್ದು ಡಿಸ್ಟಿಲರಿಗಳು ನಿಯಮಾನುಸಾರ ಮೆಕ್ಕೆ ಖರೀದಿಗೆ ಮುಂದೆ ಬರಬೇಕು.
ಇದನ್ನು ಓದಿ: ಸಿಎಂ ಆಗಿ ನಾನೇ ಮುಂದುವರಿಯುತ್ತೇನೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಇದಕ್ಕೆ ರಾಜ್ಯ ಸರ್ಕಾರ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವ್ಯಕ್ತವಾದ ಸಲಹೆಗಳು:
1) ಮೆಕ್ಕೆಜೋಳ ಆಮದು ಮೇಲೆ ಕೇಂದ್ರ ಸರ್ಕಾರ ತಕ್ಷಣ ನಿಯಂತ್ರಣ ಹೇರುವ ಮೂಲಕ ಬೆಲೆಯಲ್ಲಿ ಸ್ಥಿರತೆ ಸಾಧಿಸಲು ಸಾಧ್ಯವಿದೆ. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು.
2) ಸದ್ಯಕ್ಕೆ 8 ಲಕ್ಷ ಟನ್ ಮೆಕ್ಕೆಜೋಳ ತಕ್ಷಣ ಖರೀದಿಸಲು ಸದರಿ ಏಜೆನ್ಸಿಗಳು ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು.
3) ಖರೀದಿ ಕೇಂದ್ರಗಳನ್ನು ನಾಫೆಡ್/ಎನ್ಸಿಸಿಎಫ್ ಇನ್ನೂ ಆರಂಭಿಸದಿರುವುದರಿಂದ ತೊಂದರೆಯಾಗಿದ್ದು, ಮಾರುಕಟ್ಟೆಯಲ್ಲಿ ಧಾರಣೆಯನ್ನು ಸ್ಥಿರಗೊಳಿಸಲು ತಕ್ಷಣ ಖರೀದಿ ಪ್ರಾರಂಭಿಸಬೇಕು.
4) ಈ ಬಗ್ಗೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಈ ಕುರಿತು ನೆರವು ಒದಗಿಸಲು ಕೋರಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸಭೆಗೆ ಮಾಹಿತಿ ನೀಡಿದರು.
ಇದನ್ನು ಓದಿ: ನಟ ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಮುಖ್ಯಮಂತ್ರಿಗಳು ಸಭೆಯಲ್ಲಿ ನೀಡಿದ ಸೂಚನೆಗಳು:
1) ಬೆಲೆ ಕುಸಿತದಿಂದ ಸಂಕಷ್ಜ ಎದುರಿಸುತ್ತಿರುವ ರಾಜ್ಯದ ಮೆಕ್ಕೆ ಜೋಳ ರೈತರ ನೆರವಿಗೆ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
2) 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳವನ್ನು ಆಮದು ಮಾಡಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿಯೇ ಉತ್ಪಾದನೆ ಹೆಚ್ಚಾಗಿರುವುದರಿಂದ ಆಮದು ಮೇಲೆ ನಿರ್ಬಂಧ ವಿಧಿಸಲು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ.
3) ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆ ಜೋಳವನ್ನು ತಕ್ಷಣ ಖರೀದಿಸಲು ಸೂಚಿಸಿ ರಾಜ್ಯದ ಪ್ರಮುಖ ಡಿಸ್ಟಿಲರಿಗಳೊಂದಿಗೆ ಸಭೆ ನಡೆಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
4) ಇದೇ ರೀತಿ ಕುಕ್ಕುಟೋದ್ಯಮಕ್ಕೆ ಮೆಕ್ಕೆಜೋಳದ ಬೇಡಿಕೆಯಿದ್ದು, ಅವರೊಂದಿಗೆ ಸಹ ಮಾತುಕತೆ ನಡೆಸಲು ಸೂಚನೆ ನೀಡಿದರು.





