ಬಳ್ಳಾರಿ: ಬಿಜೆಪಿ ಬಿಟ್ಟು ನಾನೆಲ್ಲಿ ಹೋಗಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ವಾಪಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಳ್ಳಾರಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು, ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಬೆಂಗಳೂರಿನಲ್ಲಿ ನಿನನೆ ಬಿಜೆಪಿ ಕುರುಬ ಸಮಾಜದ ಮುಖಂಡರ ಸಭೆ ನಡೆದಿದೆ. ನನ್ನ ಮೇಲಿನ ಪ್ರೀತಿ, ವಿಶ್ವಾಸದಿಂದ ಅವರು ಮಾತನಾಡಿದ್ದಾರೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿಯನ್ನು ಬಿಟ್ಟು ನಾನೆಲ್ಲಿ ಹೋಗಲಿ? ನನ್ನ ಜೀವ ಇರುವುದೇ ಬಿಜೆಪಿಯಲ್ಲಿ ಎಂದು ಹೇಳಿದರು.
ಇನ್ನು ನನಗೆ ಬೇರೆ ಪಕ್ಷಗಳಿಂದಲೂ ಆಫರ್ ಬಂದಿತ್ತು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಕೂಡ ಕರೆದಿದ್ದರು. ಸಿದ್ದರಾಮಯ್ಯ ಸಂಪುಟದ ಸಚಿವರು ಕೂಡ ನನ್ನನ್ನು ಕರೆದಿದ್ದರು. ನಾನು, ಯಡಿಯೂರಪ್ಪ, ಅನಂತ ಕುಮಾರ್ ಸೇರಿ ಪಕ್ಷ ಕಟ್ಟಿದ್ದೇವೆ. ಅದಕ್ಕಿಂತ ಮೊದಲು ಅನೇಕರು ಪಕ್ಷಕ್ಕಾಗಿ ರಕ್ತ ಸುರಿದಿದ್ದಾರೆ. ನಾನು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ ಎಂದು ವಾಪಸ್ ಪಕ್ಷ ಸೇರುವ ಬಗ್ಗೆ ಈಶ್ವರಪ್ಪ ಇಂಗಿತ ವ್ಯಕ್ತಪಡಿಸಿದ್ದಾರೆ.





