ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಮುನಿರತ್ನ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಮೊಟ್ಟೆ ದಾಳಿ ಆಗಿರುವುದು ಸಣ್ಣ ಘಟನೆಯಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಘಟನೆ ನಡೆದಿದೆ ಎಂದು ಆರೋಪಿಸಿದರು.
ಇನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ವಿಜಯೇಂದ್ರ ಅವರು, ಸರ್ಕಾರ ಬಂದಾಗಿನಿಂದ ಮುನಿರತ್ನ ಮೇಲೆ ಒತ್ತಡ ಹಾಕಲಾಗುತ್ತಿದೆ. ಹೇಗಾದರೂ ಮಾಡಿ ರಾಜೀನಾಮೆ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ವಿರೋಧ ಪಕ್ಷದವರ ಮೇಲೆ ಪೊಲೀಸರನ್ನು ಬಳಸಿ ಒತ್ತಡ ಹೇರುತ್ತಿದ್ದಾರೆ. ಇದೊಂದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.
ಯಾರೇ ಬಂದು ಚೂರಿ ಹಾಕಿದರೂ ಗೊತ್ತಾಗಬಾರದು ಎಂದು ಗನ್ಮ್ಯಾನ್ ತೆಗೆದಿದ್ದಾರೆ. ಮುನಿರತ್ನಗೆ ಕೊಲೆ ಬೆದರಿಕೆಯಿದೆ. ಮುನಿರತ್ನ ಬಲಾಢ್ಯರು ಎಂದು ಅವರನ್ನು ಕುಗ್ಗಿಸಲು ಯತ್ನ ನಡೆದಿದೆ. ನಮ್ಮ ಪಕ್ಷ ಮುನಿರತ್ನ ಅವರೊಂದಿಗೆ ಸದಾ ಇರುತ್ತದೆ ಎಂದು ಹೇಳಿದರು.